
Application invited for establishment of Pulses Processing & Packaging Unit

ಬೇಳೆಕಾಳು ಸಂಸ್ಕರಣಾ & ಪ್ಯಾಕೇಜಿಂಗ್ ಘಟಕ ಸ್ಥಾಪನೆಗಾಗಿ ಅರ್ಜಿ ಆಹ್ವಾನ

ಕೊಪ್ಪಳ ಮೇ 04 (ಕರ್ನಾಟಕ ವಾರ್ತೆ): ಕೃಷಿ ಇಲಾಖೆಯಿಂದ 2026-27ನೇ ಸಾಲಿನ “ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತಾ ಅಭಿಯಾನ” ಕಾರ್ಯಕ್ರಮದಡಿ ಬೇಳೆಕಾಳು (ದಾಲ್ ಮಿಲ್) ಸಂಸ್ಕರಣಾ ಮತ್ತು ಪ್ಯಾಕೇಜಿಂಗ್ ಘಟಕ ಸ್ಥಾಪನೆಗಾಗಿ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಭಾರತ ಸರ್ಕಾರವು ಜಾರಿಗೊಳಿಸಿರುವ “ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತಾ ಅಭಿಯಾನ – Mission for Atmanirbharta in Pulses (MAP)” ಕಾರ್ಯಕ್ರಮದಡಿ ಕರ್ನಾಟಕ ರಾಜ್ಯಕ್ಕೆ ಒಟ್ಟು 30 ಬೇಳೆಕಾಳು ಸಂಸ್ಕರಣಾ ಮತ್ತು ಪ್ಯಾಕೇಜಿಂಗ್ ಘಟಕಗಳ ಗುರಿ ನೀಡಲಾಗಿರುತ್ತದೆ. ಈ ಯೋಜನೆಯಡಿ ಯೋಜನಾ ವೆಚ್ಚದ ಶೇ.33 ರಷ್ಟು ಅಥವಾ ಗರಿಷ್ಠ ರೂ. 25 ಲಕ್ಷಗಳ ಮಿತಿಯಲ್ಲಿ ಸಹಾಯಧನ ನೀಡಲಾಗುತ್ತದೆ. ಕೊಪ್ಪಳ ಜಿಲ್ಲೆಯು ತೊಗರಿ ಬೆಳೆಯಲ್ಲಿ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿರುವುದರಿಂದ, ಜಿಲ್ಲೆಯ ರೈತರಿಗೆ ಮತ್ತು ಉದ್ಯಮಿಗಳಿಗೆ ಇದು ಆದಾಯ ಹೆಚ್ಚಿಸಿಕೊಳ್ಳಲು, ಸ್ಥಳೀಯ ಉದ್ಯೋಗ ಸೃಷ್ಟಿಸಲು ಹಾಗೂ ಬೇಳೆಕಾಳುಗಳ ಮೌಲ್ಯವರ್ಧನೆಗೆ ಅತ್ಯುತ್ತಮ ಅವಕಾಶವಾಗಿದೆ.
ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕನಕಗಿರಿ, ಕಾರಟಗಿ ಮತ್ತು ಕುಕನೂರು ಒಳಗೊಂಡಂತೆ ಜಿಲ್ಲೆಯ ಎಲ್ಲಾ 7 ತಾಲೂಕುಗಳ ಆಸಕ್ತ ರೈತರು, ರೈತ ಉತ್ಪಾದಕ ಸಂಸ್ಥೆಗಳು (ಎಫ್.ಪಿ.ಓ), ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಪಿಎಸಿಎಸ್), ಸ್ವಸಹಾಯ ಗುಂಪುಗಳು (ಎಸ್.ಹೆಚ್.ಜಿ) ಮತ್ತು ಯಾವುದೇ ನೋಂದಾಯಿತ ಸಂಸ್ಥೆಗಳು, ವೈಯಕ್ತಿಕ ಫಲಾನುಭವಿಗಳು (ರೈತರು, ಉದ್ಯಮಿಗಳು) ಅರ್ಜಿ ಸಲ್ಲಿಸಬಹುದು.
*ವೈಯಕ್ತಿಕ ಫಲಾನುಭವಿಗಳಿಗೆ ಅರ್ಹತೆಯ ಮಾನದಂಡ:* ವೈಯಕ್ತಿಕ ಫಲಾನುಭವಿಗಳು ಕನಿಷ್ಠ 21 ವರ್ಷ ವಯೋಮಿತಿ ಹೊಂದಿರಬೇಕು. ಪ್ರತಿ ಕುಟುಂಬದಿಂದ (ಪತಿ ಅಥವಾ ಪತ್ನಿ ಮತ್ತು ಅವಿವಾಹಿತ ಮಕ್ಕಳು) ಒಬ್ಬ ಅರ್ಹ ಫಲಾನುಭವಿಗೆ ಮಾತ್ರ ಸಹಾಯಧನಕ್ಕೆ ಅವಕಾಶವಿರುತ್ತದೆ. ಯೋಜನಾ ವೆಚ್ಚದ ಶೇ. 15ರಷ್ಟು ಸ್ವಂತ ಬಂಡವಾಳ ಹೂಡಿಕೆ ಮಾಡುವ ಸಾಮರ್ಥ್ಯ ಹೊಂದಿರಬೇಕು.
*ಗುಂಪು-ಸಂಸ್ಥೆಗಳಿಗೆ ಮಾನದಂಡ:* ಅರ್ಹ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿಯಾಗಿರಬೇಕು ಹಾಗೂ ಕನಿಷ್ಠ 2 ವರ್ಷ ಕಾರ್ಯ ನಿರ್ವಹಿಸಿರಬೇಕು. ಯೋಜನಾ ವೆಚ್ಚದ ಶೇ. 15ರಷ್ಟು ಸ್ವಂತ ಬಂಡವಾಳ ಹೂಡಿಕೆ ಮಾಡುವ ಸಾಮರ್ಥ್ಯ ಹೊಂದಿರಬೇಕು. ಪರಿಶಿಷ್ಟ ಜಾತಿ ಅಥವಾ ಪಂಗಡ ಮತ್ತು ಮಹಿಳಾ ಫಲಾನುಭವಿಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು.
*ಘಟಕದ ತಾಂತ್ರಿಕ ಷರತ್ತುಗಳು:* ಘಟಕವು ಕನಿಷ್ಠ 300 ಕೆಜಿ ಅಥವಾ ಗಂಟೆಯ ಸಂಸ್ಕರಣಾ ಸಾಮರ್ಥ್ಯ ಹೊಂದಿರಬೇಕು. ಎಲ್ಲಾ ಯಂತ್ರೋಪಕರಣಗಳು ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಮಾನದಂಡಗಳಿಗೆ ಅನುಗುಣವಾಗಿರಬೇಕು. ಆಹಾರ ಭದ್ರತೆ ಎಫ್.ಎಸ್.ಎಸ್.ಎ.ಐ ಪ್ರಮಾಣಪತ್ರ ಮತ್ತು ಪರಿಸರ ಮಾನದಂಡಗಳ ಪಾಲನೆ ಕಡ್ಡಾಯವಾಗಿದೆ. ಫಲಾನುಭವಿಗಳು ಘಟಕ ಸ್ಥಾಪಿಸಿದ ದಿನಾಂಕದಿಂದ ಕನಿಷ್ಠ 3 ವರ್ಷಗಳವರೆಗೆ ಘಟಕವನ್ನು ನಿರ್ವಹಿಸಬೇಕು. 3 ವರ್ಷಗಳ ಒಳಗೆ ಘಟಕವನ್ನು ವರ್ಗಾವಣೆ, ಮಾರಾಟ, ಅಡಮಾನ ಅಥವಾ ಗುತ್ತಿಗೆ ಮಾಡಲು ಅವಕಾಶವಿಲ್ಲ (ನೋಡಲ್ ಇಲಾಖೆಯ ಪೂರ್ವಾನುಮೋದನೆ ಕಡ್ಡಾಯ). ಅಧಿಕಾರಿಗಳ ನಿಯತಕಾಲಿಕ ತಪಾಸಣೆ ಮತ್ತು ಮೇಲ್ವಿಚಾರಣೆಗೆ ಒಳಪಡಬೇಕು. ಎಲ್ಲಾ ಕಾರ್ಮಿಕ ಕಾನೂನು, ಸುರಕ್ಷತಾ ಮಾನದಂಡಗಳು ಮತ್ತು ಶಾಸನಬದ್ಧ ನಿಯಮಗಳ ಪಾಲನೆ ಕಡ್ಡಾಯ. ಹಣ ದುರುಪಯೋಗ ಕಂಡುಬAದರೆ ಸರ್ಕಾರಿ ನಿಯಮಗಳ ಪ್ರಕಾರ ದಂಡ ಮತ್ತು ವಸೂಲಾತಿ ಮಾಡಲಾಗುತ್ತದೆ.
ಸರ್ಕಾರಿ ಆದೇಶದಂತೆ ಅರ್ಜಿ ಸಲ್ಲಿಕೆಗೆ ಕನಿಷ್ಠ 30 ದಿನಗಳ ಕಾಲಾವಧಿ ನೀಡಲಾಗುತ್ತದೆ. 2026-27ನೇ ಸಾಲಿನಲ್ಲಿಯೇ ಘಟಕಗಳ ಅನುಷ್ಠಾನವನ್ನು ಪೂರ್ಣಗೊಳಿಸಬೇಕಾಗಿರುವುದರಿಂದ ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಶೀಘ್ರವೇ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಸಾಮಾನ್ಯ ಮಾಹಿತಿ ಮತ್ತು ಮಾರ್ಗದರ್ಶನಕ್ಕೆ ಜಂಟಿ ಕೃಷಿ ನಿರ್ದೇಶಕರು, ಕೊಪ್ಪಳ ಇವರನ್ನು ಸಂಪರ್ಕಿಸಬಹುದು. ಅರ್ಜಿ ಸ್ವೀಕರಣೆಗೆ ಸಂಬಂಧಿಸಿದಂತೆ ಆಯಾ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು, ಪ್ರಾಥಮಿಕ ಮಾಹಿತಿಗೆ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳನ್ನು ಅಥವಾ ಕರ್ನಾಟಕ ಕೃಷಿ ಇಲಾಖೆ ಜಾಲತಾಣ: raitamitra.karnataka.gov.in ಹಾಗೂ ಕೊಪ್ಪಳ ಜಿಲ್ಲಾ ಜಾಲತಾಣ: koppal.nic.in & ಕೇಂದ್ರ ಸರ್ಕಾರ ಯೋಜನೆ: agriwelfare.gov.in ಅಥವಾ ಕಿಸಾನ್ ಕಾಲ್ ಸೆಂಟರ್ (ಉಚಿತ): 1800-180-1551 ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ ಕೃಷ್ಣಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
