A grand stage for the Chief Minister’s program; neat arrangements: MLA Basanagouda Daddal

ರಾಯಚೂರು ಜೂನ್ 22 (ಕರ್ನಾಟಕ ವಾರ್ತೆ): ರಾಯಚೂರ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 936.00 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ, ಬುಡಕಟ್ಟು ಸಾಂಸ್ಕೃತಿಕ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಜೂನ್ 23ರಂದು ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಲಿರುವ ವೇದಿಕೆಯು ಯರಗೇರಾ ಗ್ರಾಮದಲ್ಲಿ ಅದ್ಧೂರಿಯಾಗಿ ಸಿದ್ಧವಾಗಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಶಾಸಕರಾದ ಬಸನಗೌಡ ದದ್ದಲ್ ಅವರು, ರಾಯಚೂರ ಲೋಕಸಭಾ ಸದಸ್ಯರಾದ ಜಿ ಕುಮಾರ ನಾಯಕ, ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಸಿಂಧನೂರು ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಶಾಸಕರಾದ ಎ ವಸಂತಕುಮಾರ ಅವರೊಂದಿಗೆ ಜೂನ್ 22ರಂದು ಯರಗೇರಾ ಗ್ರಾಮದ ಬಳಿಯಲ್ಲಿ ಸಿದ್ದವಾದ ವೇದಿಕೆಯ ಸ್ಥಳಕ್ಕೆ ಆಗಮಿಸಿ ಅಂತಿಮ ಹಂತದ ಸಿದ್ಧತೆಯನ್ನು ಪರಿಶೀಲಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಾಯಚೂರ ಜಿಲ್ಲೆಗೆ ಮಾನ್ಯ ಮುಖ್ಯಮಂತ್ರಿಗಳ ಪ್ರವಾಸ ಕಾರ್ಯಕ್ರಮ ನಿಗದಿಯಾದ ದಿನದಿಂದ ತಾವು ಹತ್ತಾರು ಭಾರಿ ಯರಗೇರಾ ಗ್ರಾಮಕ್ಕೆ ಮತ್ತು ವಿಶ್ವವಿದ್ಯಾಲಯದ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರಿಂದಾಗಿ, ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಶೀಲನೆ ನಡೆಸಿದ್ದರಿಂದಾಗಿ ರಾಯಚೂರ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸೇರಿದಂತೆ ಇನ್ನೀತರ ಕಾರ್ಯಕ್ರಮಗಳ ಸಿದ್ಧತೆಯು ಅಚ್ಚುಕಟ್ಟಾಗಿ ನಡೆದು ಇದೀಗ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ಶಾಸಕರು ತಿಳಿಸಿದರು.
ರಾಯಚೂರ ಗ್ರಾಮೀಣ ಕ್ಷೇತ್ರದಲ್ಲಿಯೇ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿ ಇತಿಹಾಸದ ಪುಟ ಸೇರ್ಪಡೆಯಾಗುವ ಹಾಗೆ ಕಾರ್ಯಕ್ರಮವು ಸಿದ್ಧವಾಗಿದೆ. ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾಜ್ಯಸಭೆಯ ಸದಸ್ಯರು ಹಾಗೂ ವಿರೋಧ ಪಕ್ಷದ ನಾಯಕರಾದ ಡಾ.ಮಲ್ಲಿಕಾರ್ಜುನ ಎಂ.ಖರ್ಗೆ ಅವರು ಘನ ಉಪಸ್ಥಿತಿ ವಹಿಸುವರು. ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಗೌರವ ಉಪಸ್ಥಿತಿ ವಹಿಸುವರು. ಅದೇ ರೀತಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಚಿವರು, ರಾಯಚೂರ ಸೇರಿದಂತೆ ಸುತ್ತಲಿನ ವಿವಿಧ ಜಿಲ್ಲೆಗಳ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ಸೇರಿದಂತೆ ಯರಗೇರಾ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಎಲ್ಲ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರಾದ ಶ್ರೀಮತಿ ಉಮಾ ಮಹಾದೇವನ್ ಸೇರಿದಂತೆ ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಸರಕಾರದ ಪ್ರಧಾನ ಕಾರ್ಯದರ್ಶಿಗಳು, ರಾಯಚೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಸರಕಾರದ ಕಾರ್ಯದರ್ಶಿಗಳು, ಕಲಬುರಗಿ ಪ್ರಾದೇಶಿಕ ಆಯುಕ್ತರು, ವಿವಿಧ ಇಲಾಖೆಯ ನಿರ್ದೇಶಕರು, ರಾಯಚೂರ ಮತ್ತು ಯಾದಗಿರಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ತಿಳಿಸಿದರು.
ಎಲ್ಲಾ ಸುವ್ಯವಸ್ಥೆ: ಕಾರ್ಯಕ್ರಮ ಮುಖ್ಯ ವೇದಿಕೆಯನ್ನು ಸಕಲ ಸೌಕರ್ಯಗಳಿಂದ ಸಿದ್ದಪಡಿಸಲಾಗಿದೆ. ವೇದಿಕೆಯ ಸುತ್ತಲು ಯಾವುದೇ ರೀತಿಯ ಗೌಜುಗದ್ದಲವಾಗದಂತೆ ಸೂಕ್ತ ಬ್ಯಾರಿಕೇಡ್ ಅಳವಡಿಕೆ, ವಾಹನಗಳ ಪಾರ್ಕಿಂಗ್, ವೇದಿಕೆಯ ಪಕ್ಕದಲ್ಲಿ ಪ್ರತ್ಯೇಕ ಸ್ಥಳದಲ್ಲಿ ಪೆಂಡಾಲ್ ಅಳವಡಿಸಿ ಊಟದ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಿಗಿಬಂದೋಬಸ್ತ್ ಮಾಡಲು ಬೇರೆ ಬೇರೆ ಜಿಲ್ಲೆಗಳಿಂದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರೆಯಿಸಿದ್ದು ಯಾವುದೇ ರೀತಿಯ ಅವಘಡಗಳು ನಡೆಯದಂತೆ ಎಲ್ಲಾ ಕಡೆಗಳಲ್ಲಿ ಖಾಕಿಪಡೆಯು ಸೂಕ್ತ ಕಣ್ಗಾವಲು ಇರಿಸಿದೆ. ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು, ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕಾಗಿ ಉತ್ತಮವಾಗಿ ಸಮನ್ವಯ ಮಾಡಿದ್ದಾರೆ ಎಂದು ಶಾಸಕರು ತಿಳಿಸಿದರು.
ಬುಡಕಟ್ಟು ಸಾಂಸ್ಕೃತಿಕ ಉತ್ಸವ: ರಾಯಚೂರ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 936.00 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯ ಕಾರ್ಯಕ್ರಮದ ಜೊತೆಗೆ ಬುಡಕಟ್ಟು ಸಾಂಸ್ಕೃತಿಕ
ಉತ್ಸವ ಕಾರ್ಯಕ್ರಮ ಕೂಡ ನೆರವೇರಲಿದೆ. ಬೇರೆ ಬೇರೆ ಜಿಲ್ಲೆಗಳಿಂದ ಬುಡಕಟ್ಟು ಸಮುದಾಯದ ಕಲಾ ತಂಡಗಳು ರಾಯಚೂರಿಗೆ ಬಂದಿವೆ. ವೇದಿಕೆಯ ಎದುರುಗಡೆ ಇರುವ ಸ್ಥಳದಲ್ಲಿ ಬುಡಕಟ್ಟು ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ವಿವಿಧ ಬುಡಕಟ್ಟು ತಂಡಗಳಿಗೆ ಮತ್ತು ಸರ್ಕಾರದ ವಿವಿಧ ಯೋಜನೆಗಳ ಪ್ರಚಾರಾರ್ಥ ವಿವಿಧ ಇಲಾಖೆಗಳಿಂದ ಮಳಿಗೆಯನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಬುಡಕಟ್ಟು ಸಮುದಾಯಗಳ ಆಚಾರ ವಿಚಾರದ ಬಗ್ಗೆ ತಿಳಿಯಲು ಮತ್ತು ಸರ್ಕಾರದ ವಿವಿಧ ಕಾರ್ಯಕ್ರಮಗಳ ಬಗ್ಗೆ ಅರಿಯಲು ಈ ಕಾರ್ಯಕ್ರಮದಿಂದ ಸಹಕಾರಿಯಾಗಲಿದೆ ಎಂದು ಶಾಸಕರು ತಿಳಿಸಿದರು.
ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮ: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ನಾಮಕರಣ, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಉದ್ಯಾನವನ ಮತ್ತು ಕಂಚಿನ ಪುತ್ಥಳಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಜಿನೋಮ್ ಅಧ್ಯಯನ ಸಂಸ್ಥೆಯ ಶಂಕುಸ್ಥಾಪನೆ ಸಮಾರಂಭದ ಉದ್ಘಾಟನೆಯನ್ನು ಸಹ ಮಾನ್ಯ ಮುಖ್ಯಮಂತ್ರಿಗಳು ಜೂನ್ 23ರಂದು ಬೆಳಗ್ಗೆ 11 ಗಂಟೆಗೆ ಆದಿಕವಿ
ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ರಾಯಚೂರು ಆವರಣದಲ್ಲಿ ನರವೇರಿಸಲಿದ್ದಾರೆ. ಇದಕ್ಕಾಗಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸಜ ಹಬ್ಬದ ಸಂಭ್ರಮ ಕಾಣುತ್ತಿದೆ. ರಾಯಚೂರಲ್ಲಿರುವ ವಿಶ್ವವಿದ್ಯಾಲಯದ ಮರುನಾಮಕರಣ ಸೇರಿದಂತೆ ವಿಶ್ವವಿದ್ಯಾಲಯದ ಆವರಣದಲ್ಲಿ ಚಾಲನೆ ಸಿಗುವ ಅಭಿವೃದ್ಧಿ ಕಾರ್ಯಗಳಿಂದಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಹ ರಾಯಚೂರು ಹೆಸರು ಜಾಗತಿಕವಾಗಿ ಚಿರಪರಿಚಿತವಾಗಲಿದೆ ಎಂದು ಶಾಸಕರು ತಿಳಿಸಿದರು.
ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ: ನಮ್ಮ ಹಿರಿಯರ ಪರಿಶ್ರಮದಿಂದಾಗಿ 371(ಜೆ) ವಿಶೇಷ ಸ್ಥಾನಮಾನ ರಾಯಚೂರ ಸೇರಿದಂತೆ ಕಲ್ಯಾಣ ಭಾಗದ ಎಲ್ಲ ಜಿಲ್ಲೆಗಳಿಗೆ ಲಭ್ಯವಾಗಿದ್ದರಿಂದಾಗಿ ನಮಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಸೌಕರ್ಯ ದೊರೆತು ಉದ್ಯೋಗವಕಾಶ ಸಿಗುವಂತಾಗಿದೆ. ಕೆಕೆಆರ್ಡಿಬಿಯಿಂದಾಗಿ ವಿಶೇಷ ಅನುದಾನವು ಸಹ ನಮ್ಮ ಭಾಗಕ್ಕೆ ಲಭ್ಯವಾಗಿ ಈ ಭಾಗದಲ್ಲಿ ನಾನಾ ಅಭಿವೃದ್ದಿ ಕಾರ್ಯಗಳು ನಡೆಯುವಂತಾಗಿದೆ. ಹೀಗಾಗಿ ಸಂವಿಧಾನ ಅನುಚ್ಚೇದ 371 (ಜೆ) ದಶಮಾನೋತ್ಸವ ನೆನಪಿನ ವಿಶೇಷ ಪುಸ್ತಕದ ಬಿಡುಗಡೆಯು ನಡೆಯಲಿದೆ. ರಾಯಚೂರು ತಾಲೂಕಿನ ಯರಗೇರಾ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಹತ್ತಿರ ಜೂನ್ 23ರ ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ರಾಯಚೂರ ಸೇರಿದಂತೆ ಯಾದಗಿರಿ, ಕಲಬುರಗಿ, ಬೀದರ, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಗೊಳಿಸಬೇಕು ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಇದೆ ಸಂದರ್ಭದಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಪಾಟೀಲ ಇಟಗಿ, ಮಲ್ಲಿಕಾರ್ಜುನಗೌಡ ತಲಮಾರಿ, ರಜಾಕ್ ಉಸ್ತಾದ್, ಅಸ್ಲಂ ಪಾಶಾ ಸೇರಿದಂತೆ ಇನ್ನೀತರರು ಇದ್ದರು.