Anganwadi is an important center for providing primary education to children: Hussain amma

ಗಂಗಾವತಿ : ಅಂಗನವಾಡಿ ಕೇಂದ್ರಗಳು ಮಕ್ಕಳ ಪ್ರಾಥಮಿಕ ಹಂತದ ಶಿಕ್ಷಣ ಒದಗಿಸುವ ಒಂದು ಪ್ರಮುಖ ಕೇಂದ್ರಗಳಾಗಿವೆ ಎಂದು ಮರಳಿ ಗ್ರಾಮಪಂಚಾಯತ್ ಅಧ್ಯಕ್ಷೆ ಹುಸೇನಮ್ಮ ಅವರು ಹೇಳಿದರು.
ಅವರು ಶುಕ್ರವಾರದಂದು ತಾಲೂಕಿನ ಮರಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಪ್ರಗತಿನಗರ ಗ್ರಾಮದ 4 ನೇವಾರ್ಡಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಯು ಸಹ ಅಂಗನವಾಡಿ ಕೇಂದ್ರಗಳಿಂದಲೇ ಪ್ರಾರಂಭವಾಗುತ್ತವೆ. ಆದ್ದರಿಂದ ಮುತುವರ್ಜಿ ವಹಿಸಿ ಮಕ್ಕಳನ್ನು ಸಲಹುವ ಜವಾಬ್ದಾರಿಯು ಅಂಗನವಾಡಿ ಶಿಕ್ಷಕರು ಹಾಗೂ ಸಹಾಯಕಿಯರದ್ದಾಗಿರುತ್ತದೆ ಎಂದರು. ಅಂಗನವಾಡಿ ಕೇಂದ್ರಗಳು ಮಕ್ಕಳ ಭವಿಷ್ಯವನ್ನು ನಿರ್ಧರಿಸುವ ಕೇಂದ್ರಗಳಾಗಿದ್ದು, ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸೇರಿಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಬಳಿಕ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವರಾಜ ಗೌಡ್ರು ಮಾತನಾಡಿ, ಬಹಳ ವರ್ಷಗಳ ಬೇಡಿಕೆಯಾದ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ ಸಚಿವರಾದ ಶಿವರಾಜ್ ತಂಗಡಗಿ ಅವರ ಹಾಗೂ ಹಿಂದಿನ ಶಾಸಕರ ಸಹಕಾರದಿಂದ ನಿರ್ಮಾಣಗೊಂಡಿದೆ. ಇನ್ನೂ ಈ ಕಟ್ಟಡ ನಿರ್ಮಾಣ ಸೇರಿದಂತೆ ಅಂಗನವಾಡಿಗಳಿಗೆ ಕಾಂಪೌಂಡ್ ನಿರ್ಮಾಣವು ಅತ್ಯವಶ್ಯಕವಾಗಿತ್ತು. ಈ ನಿಟ್ಟಿನಲ್ಲಿ ಪ್ರಗತಿನಗರ ಗ್ರಾಮದ ಗ್ರಾಮಪಂಚಾಯತ್ ಸದಸ್ಯರ ಒತ್ತಾಸೆ ಮತ್ತು ಮನವಿ ಮೇರೆಗೆ ತಾಲೂಕು ಪಂಚಾಯತ್ ನಿಂದ ಅನುದಾನ ಬಿಡುಗಡೆಗೊಂಡು, ಕಾಂಪೌಂಡ್ ನಿರ್ಮಾಣಗೊಂಡಿದ್ದು, ಅಂಗನವಾಡಿಗೆ ಬರುವ ಮಕ್ಕಳಿಗೆ ಸೂಕ್ತ ರಕ್ಷಣೆ ಸಿಕ್ಕಂತಾಗಿದೆ. ಮಕ್ಕಳಿಗೆ ಪ್ರಾಥಮಿಕ ಪೂರ್ವ ಶಿಕ್ಷಣ ಒದಗಿಸಲು ಅಂಗನವಾಡಿ ಕೇಂದ್ರ ಪಾತ್ರ ದೊಡ್ಡದಿದ್ದು, ಅಂಗನವಾಡಿಗಳ ಅಭಿವೃದ್ಧಿಗೆ ನಮ್ಮ ಪಂಚಾಯತ್ ಸದಾ ಸಿದ್ದವಿದೆ ಎಂದು ತಿಳಿಸಿದರು.
ಈ ಸಂಧರ್ಬದಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ರಫೀ, ಗ್ರಾಮಪಂಚಾಯತ್ ಸದಸ್ಯರಾದ ಕೆ.ರೋಹಿಣಿ ಕೊಟ್ರೇಶ್, ನಜೀಯಾಮನ್ಸೂರ್ ಬೇಗ್, ವೀರುಪಾಕ್ಷಪ್ಪ ಹೇಮಗುಡ್ಡ, ಶಿವಲಿಂಗಪ್ಪ, ಹೆಬ್ಬಾಳ ನಾಗರಾಜ್, ಮುಖಂಡರಾದ ಹನುಮಂತರಾಯ, ಗುಂಡಯ್ಯಸ್ವಾಮಿ ಹಿರೇಮಠ, ಮಹಾದೇವಪ್ಪ, ಅಯ್ಯಪ್ಪ ದಳಪತಿ, ನಾಗಭೂಷಣ ಸ್ವಾಮಿ, ಜ್ಞಾನೇಶ್ವರಸ್ವಾಮಿ, ರಾಜಾಸಾಬ ಮೇಸ್ತ್ರಿ, ಮಹಾಂತಪ್ಪ,ಶಿವನಪ್ಪ,ಎಂ. ಬಸಪ್ಪ, ಯುವ ಮುಖಂಡರಾದ ಬಾಷಾ, ಶಿವಕುಮಾರ್ ಸ್ವಾಮಿ, ಅಸ್ವಥ್, ಆಸೀಫ್, ಸಾಹುಕಾರ್ ಬಸವರಾಜ್, ಸಾಹುಕಾರ್ ಅಮರೇಶ್ ಸೇರಿದಂತೆ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕರಾದ ಚಂದ್ರಕಲಾ, ಅಂಗನವಾಡಿ ಕೇಂದ್ರದ ಶಿಕ್ಷಕಿಯರಾದ ಜಯಮ್ಮ, ನಾಗರತ್ನ, ದುರಗಮ್ಮ, ನಾಗಮ್ಮ ಮತ್ತು ಅಂಗನವಾಡಿ ಕೇಂದ್ರಗಳ ಸಹಾಯಕಿರು ಇದ್ದರು..