Breaking News

ಹಟ್ಟಿ ಗೋಲ್ಡ್ ಮೈನ್ ಕಂಪನಿಯ ನೌಕರರ ಸುರಕ್ಷತೆಗೆ ಗಮನ ಹರಿಸಿ: ಟಿ.ಎ.ಶರವಣ ನಿರ್ದೇಶನ

Pay attention to the safety of employees of Hatti Gold Mine Company: T.A. Sharavan directs

ಜಾಹೀರಾತು

ರಾಯಚೂರಿನ ಹಟ್ಟಿಗೆ ಭೇಟಿ‌ ನೀಡಿದ ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿ

ರಾಯಚೂರ ಜೂನ್ 11 (ಕ.ವಾ.): ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಾದ
ಟಿ.ಎ.ಶರವಣ ಹಾಗೂ ಸಮಿತಿಯ ಸದಸ್ಯರ ತಂಡವು ಜೂನ್ 11ರಂದು ಲಿಂಗಸೂರ ತಾಲೂಕಿನ ಹಟ್ಟಿ ಗೋಲ್ಡ್ ಮೈನ್ ಕಂಪನಿಗೆ ಭೇಟಿ ನೀಡಿತು.
ಪೂರ್ವ ನಿಗದಿಯಂತೆ ತಂಡವು ಮೊದಲಿಗೆ ಹಟ್ಟಿ ಚಿನ್ನದ ಗಣಿ ವೀಕ್ಷಣೆ‌ಯನ್ನು ನಡೆಸಿತು. ಬರೋಬ್ಬರಿ ಒಂದು ಕಿ.ಮೀ ಆಳದಷ್ಟು ಗಣಿಗಿಳಿದ ಶಾಸಕರು ಚಿನ್ನ ಉತ್ಪಾದನೆಯ ಪರಿಯ ಕಂಡು ಬೆರಗಾದರು. ಬಳಿಕ ಚಿನ್ನದ ಗಣಿಯ ಲೋಹ ವಿಭಾಗಕ್ಕೆ ತೆರಳಿ ಖುದ್ದು ವೀಕ್ಷಣೆ ನಡೆಸಿದರು.
ಲೋಹ ವಿಭಾಗದ ಉಪಪ್ರಧಾನ ವ್ಯವಸ್ಥಾಪಕರಾದ ವಿಧಾತ್ರಿ ಅವರು, ಚಿನ್ನ ಸಂಸ್ಕರಣೆಯ ವಿಧಿವಿಧಾನಗಳ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು.
ಬಳಿಕ ಕಂಪನಿಯ ಸಭಾಂಗಣದಲ್ಲಿ ಸಭೆ ನಡೆಯಿತು. ಈ ವೇಳೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಭರವಸೆಗಳ ಸಂಖ್ಯೆ:7622 ಮತ್ತು 7387ಕ್ಕೆ ಸಂಬಂಧಿಸಿದಂತೆ ವಿವರಣೆ ಪಡೆದುಕೊಂಡರು.
ಕಂಪನಿಯ ನೌಕರರೊಬ್ಬರು ಮೃತಪಟ್ಟ ವಿಷಯದ ಬಗ್ಗೆ ಅಧ್ಯಕ್ಷರು ವಿವರಣೆ ಕೇಳಿದರು.
ಕಂಪನಿಯಲ್ಲಿ ಪ್ರಗತಿ ಕಾರ್ಯ ನಡೆಯುವ ವೇಳೆ ಮಸೀನದಲ್ಲಿದ್ದ ಒಬ್ಬ ವ್ಯಕ್ತಿಯು ಪ್ರಾಣ ಕಳೆದುಕೊಂಡರು. ಇವರ ಕುಟುಂಬದವರಿಗೆ ಈಗಾಗಲೇ 5 ಲಕ್ಷ ರೂ ಪರಿಹಾರ ನೀಡಿದೆ. ಮೃತನ ಪತ್ನಿಗೆ ಮ್ಯಾನೇಜರ್ ದರ್ಜೆಯ ಹುದ್ದೆಯ ಕೆಲಸ ಕೊಡಲು ಕ್ರಮವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಈ ವೇಳೆ ಸಮಿತಿಯ ಅಧ್ಯಕ್ಷರಾದ ಟಿ.ಎ.ಶರವಣ ಅವರು ಮಾತನಾಡಿ, ಇನ್ಮುಂದೆ ಇಂತಹ ಕಹಿ ಘಟನೆಗಳು ಮರುಕಳಿಸದ ಹಾಗೆ ಹಟ್ಟಿ ಗೋಲ್ಡ್ ಮೈನ್ ಕಂಪನಿ ನಿಯಮಿತದ ನೌಕರರ ಜೀವ ಸುರಕ್ಷತೆಗೆ ಗಮನ ಹರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
25 ಲಕ್ಷಕ್ಕೆ ಏರಿಸಿ: ಕಂಪನಿಯಲ್ಲಿ ಕೆಲಸದ ವೇಳೆ ಪ್ರಾಣ ಕಳೆದುಕೊಂಡ ನೌಕರರ ಕುಟುಂಬದ ಸಂತ್ರಸ್ತರಿಗೆ ಇನ್ಮುಂದೆ ಕನಿಷ್ಟ 25 ಲಕ್ಷ ಪರಿಹಾರ ಧನ ನೀಡಲು ಕರ್ನಾಟಕ ವಿಧಾನ ಪರಿಷತ್ತಿನ ಭರವಸೆಗಳ ಸಮಿತಿ ಸೂಚನೆ ನೀಡುತ್ತಿದೆ. ಸಭೆಯಲ್ಲಿ ಚರ್ಚೆಯಾಗಿದೆ ಎಂದು ಉಲ್ಲೇಖಿಸಿ 25 ಲಕ್ಷ ರೂ ಕೊಡಲು ಬೋರ್ಡಗೆ ಶಿಫಾರಸ್ಸು ಮಾಡಲು ಕ್ರಮವಹಿಸಬೇಕು ಎಂದು ಸಮಿತಿಯ ಸದಸ್ಯರು ಇದೆ ವೇಳೆ ಸೂಚನೆ ನೀಡಿದರು.
ಹಾಸ್ಪಿಟಲ್ ಮೇಲ್ದರ್ಜೇಗೇರಿಸಿ: ಕಂಪನಿಯ ಆವರಣದಲ್ಲಿನ ಹಾಸ್ಪಿಟಲನ ಸದ್ಯದ ಪರಿಸ್ಥಿತಿ ಸರಿಯಿಲ್ಲ. ಇದು ಬದಲಾಗಬೇಕು. ನೌಕರರಿಗೆ ಎಲ್ಲಾ ರೀತಿಯ ಚಿಕಿತ್ಸೆ ಸಿಗುವ ನಿಟ್ಟಿನಲ್ಲಿ ಈಗಿರುವ ಆಸ್ಪತ್ರೆಯನ್ನು ಮೇಲ್ದರ್ಗೇರಿಸಬೇಕು ಎಂದು ಅಧ್ಯಕ್ಷರು ಎಂಡಿ ಅವರಿಗೆ ನಿರ್ದೇಶನ ನೀಡಿದರು.
ಮಕ್ಕಳಿಗೆ ಸೌಲಭ್ಯ ಕಲ್ಪಿಸಿ: ಕೆಳಗಿಳಿದರೆ ಹೊರ ಬರುತ್ತವೆಯೋ ಇಲ್ಲೊ ಅನ್ನುವಂತಹ ಮೈನಿಂಗ್ ಕಂಪನಿಯಲ್ಲಿ ಬೆಂಕಿ, ಬೃಹಧಾಕಾರದ ಮಸೀನ್ ಬಳಿ ಕೆಲಸ ಮಾಡುವ ನೌಕರರ ಕುಟುಂಬದವರ ಮಕ್ಕಳಿಗೆ ಇಲ್ಲಿಯೇ ಉನ್ನತ ದರ್ಜೆಯ ಶಿಕ್ಷಣ ಸಿಗುವ ನಿಟ್ಟಿನಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಲು ಕ್ರಮವಹಿಸಬೇಕು ಎಂದು ಸಮಿತಿಯ ಸದಸ್ಯರು ಕಂಪನಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವರದಿ ಕೊಡಿ: ಕಂಪನಿಯ ಹೊರಗುತ್ತಿಗೆ ನೌಕರರಿಗೆ ಮಾನವ ಸಂಪನ್ಮೂಲ ಸಂಸ್ಥೆಗಳಿಂದ ಸರಿಯಾಗಿ ವೇತನ ಪಾವತಿಯಾಗುವಂತೆ ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಸೂಚನೆ ನೀಡಿದ ಅಧ್ಯಕ್ಷರು, ಇದುವರೆಗೆ ಕಂಪನಿಯು ಹೊರಗುತ್ತಿಗೆ ನೌಕರರ ವೇತನಕ್ಕಾಗಿ ಮಾನವ ಸಂಪನ್ಮೂಲ ಸಂಸ್ಥೆಗಳಿಗೆ ಹಣ ಸಂದಾಯ ಮಾಡಿದ ಬಗ್ಗೆ ವಿವರವಾದ ಮಾಹಿತಿ ನೀಡಲು ಅಧಿಕಾರಿಗಳಿಗೆ ಅಧ್ಯಕ್ಷರು ಸೂಚನೆ ನೀಡಿದರು.
ಮತ್ತೊಮ್ಮೆ ಪರಿಶೀಲಿಸಿ: ಈ ಕಂಪನಿಯಲ್ಲಿ ನೌಕರರು ಕಷ್ಟಕರ ಕೆಲಸ ಮಾಡುತ್ತಾರೆ. ನಾನಾ ಕಾರಣಕ್ಕೆ ನೌಕರಿ ಕಳೆದುಕೊಂಡ ಕಂಪನಿಯ ಕೆಲ ನೌಕರರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಲು ಪುನಃ ಪರಿಶೀಲಿಸಬೇಕು ಎಂದು ಅಧ್ಯಕ್ಷರು ಸೂಚನೆ ನೀಡಿದರು.
ನ್ಯೂ ಟೆಕ್ನಾಲಜಿ ಅಳವಡಿಸಿ: ಹಟ್ಟಿ ಗೋಲ್ಡ್ ಕಂಪನಿಯು ಜಿಂದಾಲ್ ಕಂಪನಿಗೆ ಸರಿಸಮವಾಗಿದೆ. ಮಸೀನಗಳು ಮಾಡಬೇಕಾದ ಎಷ್ಟೋ ಕಾರ್ಯವು ಇನ್ನು ಇಲ್ಲಿ ನೌಕರರೇ ಮಾಡುತ್ತಿದ್ದಾರೆ. ನೌಕರರ ಹಿತರಕ್ಷಣೆ ದೃಷ್ಡಿಯಿಂದ ಕಂಪನಿಯಲ್ಲಿ ಹೊಸ ಹೊಸ ತಂತ್ರಜ್ಞಾನ, ಸಲಕರಣೆ, ಮಸೀನಗಳನ್ನು ಅಳವಡಿಸುವತ್ತ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಮಿತಿಯ ಸದಸ್ಯರು ಸೂಚನೆ ನೀಡಿದರು.
ಟೆಂಡರ್ ಪಾರದರ್ಶಕವಾಗಿ ನಡೆಸಿ: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದಲ್ಲಿ ಪ್ರತಿ ವರ್ಷ ಅಂದಾಜು 1,600 ಕೆ.ಜಿ. ಬಂಗಾರದ ಉತ್ಪಾದನೆ ಆಗುತ್ತಿದೆ ಅನ್ನುವುದು ಗಮನಾರ್ಹ ಸಂಗತಿಯಾಗಿದೆ.
ಇಲ್ಲಿ ಉತ್ಪಾದನೆಯಾದ ಚಿನ್ನದ ಮಾರಾಟವು ಪಾರದರ್ಶಕವಾಗಿ ನಡೆಯಬೇಕು. ಓಪನ್ ಮಾರ್ಕೇಟನಲ್ಲಿ ಟೆಂಡರ್ ಮಾಡಿ, ಟೆಂಡರ್ ವಿವರಗಳನ್ನು ಹೆಚ್ಚಿಗೆ ಪ್ರಚುರಪಡಿಸಿ. ನೈಜ ಚಿನ್ನದ ಎಜೇನ್ಸಿಗಳು, ಮಾರಾಟಗಾರರು ಭಾಗಿಯಾಗುವ ಹಾಗೆ
ಟೆಂಡರ್ ಪ್ರಕ್ರಿಯೆ ಶಿಸ್ತು ಬದ್ಧವಾಗಿ ನಡೆಯಬೇಕು. ಇ-ಹರಾಜಿಗೆ ಕ್ರಮವಹಿಸಬೇಕು ಎಂದು ಅಧ್ಯಕ್ಷರು, ಕಂಪನಿಯ ಎಲ್ಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಕಳೆದ ಮೂರು ವರ್ಷದಲ್ಲಿ ಈ ಕಂಪನಿಯಲ್ಲಿ ಉತ್ಪಾದನೆಯಾದ ಚಿನ್ನದ ಪ್ರಮಾಣ ಎಷ್ಟು? ಯಾವ ಯಾವ ಏಜೆನ್ಸಿಗೆ? ಯಾವ ಯಾವ ದರಕ್ಕೆ ಮಾರಾಟ ಮಾಡಿದ್ದೀರಿ ಎಂಬುದರ ಬಗ್ಗೆ ಸವಿವರವಾದ ವರದಿ ನೀಡಲು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕರಾದ ನಿರಾಣಿ ಹನುಮಂತಪ್ಪ‌ ರುದ್ರಪ್ಪ, ಪ್ರತಾಪ ಸಿಂಹ ನಾಯಕ ಕೆ., ಡಿ ಎಸ್ ಅರುಣ, ಕೆ.ಎಸ್.ನವೀಣ, ಮಂಜುನಾಥ ಭಂಡಾರಿ, ತಿಪ್ಪಣ್ಣಪ್ಪ ಕಮಕನೂರ, ಕರ್ನಾಟಕ ವಿಧಾನ ಪರಿಷತ್ ಕಾರ್ಯದರ್ಶಿ ಕೆ ಆರ್ ಮಹಾಲಕ್ಷ್ಮಿ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಶಿಲ್ಪಾ, ಪೊಲೀಸ್ ಇಲಾಖೆಯ ಸಿಪಿಐ ಶ್ರೀಪಾದ ಜಲ್ದೆ ಸೇರಿದಂತೆ, ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಹಟ್ಟಿ ಗೋಲ್ಡ್ ಮೈನಿಂಗ್ ಕಂಪನಿಯ ಇನ್ನೀತರ ಅಧಿಕಾರಿಗಳು ಇದ್ದರು.

About Mallikarjun

Check Also

ಶರಣರ ಆದರ್ಶ ಪಾಲನೆ ಜತೆಗೆ ಮಕ್ಕಳಿಗೆ ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸಿ: ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ

Along with upholding the ideals of Sharan, make children aware of cultures: Sri Siddeshwara Shivacharya …

Leave a Reply

Your email address will not be published. Required fields are marked *