Taluk Lawyers Association Secretary Manjunath says women should be aware of the laws

ವಡ್ಡರಹಟ್ಟಿಯಲ್ಲಿ ಮಹಿಳಾ ಗ್ರಾಮಸಭೆ
ಗಂಗಾವತಿ : ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಕೆಲಸ ನಿರ್ವಹಿಸುತ್ತಾರೆ. ಅವರಿಗಾಗಿ ಇರುವ ಕಾನೂನಿನ ಬಗ್ಗೆ ಅರಿವು ಹೊಂದುವುದು ಬಹಳ ಮುಖ್ಯವಾಗಿದೆ. ಕಾಯ್ದೆಗಳನ್ನು ತಿಳಿದುಕೊಂಡರೆ ಮತ್ತಷ್ಟು ಸದೃಢರಾಗಲು ಸಾಧ್ಯ ಎಂದು ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಮಂಜುನಾಥ ಅವರು ಹೇಳಿದರು.
ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ಗ್ರಾಮಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮಹಿಳೆಯರ ಸಬಲೀಕರಣಕ್ಕೆ ಅನೇಕ ಕಾನೂನು ಜಾರಿತಂದರೂ ಅದರ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಲ್ಲ. ಹೆಣ್ಣು ಮಗುವಿನ ರಕ್ಷಣೆ ಮತ್ತು ಭದ್ರತೆ ವಿಚಾರದ ಕಾನೂನು ಗರ್ಭಾವಸ್ಥೆಯಿಂದಲೇ ಇರುತ್ತದೆ. ಜೊತೆಗೆ ಆಸ್ತಿ ಹಕ್ಕು, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ಕೆಲಸದ ಸ್ಥಳದಲ್ಲಿ ದೌರ್ಜನ್ಯ ತಡೆ ಕಾಯ್ದೆ, ರಾಜಕೀಯ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಮಹಿಳಾ ಮೀಸಲಾತಿ ಇದ್ದರೂ ಜಾಗೃತಿ ಇಲ್ಲವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಮಹಿಳೆಯರಿಗಾಗಿ ತಾಲೂಕು ಮಟ್ಟದಲ್ಲಿ ಉಚಿತ ಕಾನೂನು ನೆರವು ಘಟಕ ಇದ್ದು, ಇದರ ಉಪಯೋಗ ಪಡೆದುಕೊಳ್ಳಬೇಕು. ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಶೈಕಕ್ಷಣಿಕವಾಗಿ ಸದೃಢರಾಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ನಿರೀಕ್ಷಕರಾದ ಪೂರ್ಣಿಮಾ ಏಳುಬಾವಿ ಅವರು ಮಾತನಾಡಿ, ಬಾಲ್ಯ ವಿವಾಹ ಆಗದಂತೆ ಮಹಿಳೆರೆಲ್ಲ ಸಂಕಲ್ಪ ಮಾಡಬೇಕು . ಆರ್ಥಿಕವಾಗಿ ಸಬಲರಾದರೆ ಮಾತ್ರ ಎಲ್ಲ ರೀತಿಯ ಅಭಿವೃದ್ಧಿ ಸಾಧ್ಯವಾಗಿದೆ. ಇದನ್ನು ಮನಗಂಡು ಮಹಿಳೆಯರು ಎಲ್ಲ ವಲಯದಲ್ಲೂ ಕಾರ್ಯ ನಿರ್ವಹಿಸಿ ಮನ್ನಣೆ ಪಡೆಯಬೇಕು ಎಂದರು.
ಮಹಿಳಾ ದೌರ್ಜನ್ಯ ತಡೆ ಹಿಡಿಯಬೇಕು, ಇದಕ್ಕೆ ಬರಿ ಕಾನೂನು ಇದ್ದರೆ ಸಾಲದು ! ಕಾನೂನು ಬಳಕೆಯಾಗಬೇಕು. ಪುರುಷ ಸಮಾಜವೂ ಕೂಡ ಸಹಕಾರ ನೀಡಬೇಕು. ಮಹಿಳೆಯರ ರಕ್ಷಣಾ ಕಾನೂನುಬಳ ಬಗ್ಗೆ ವ್ಯಾಪಕ ತಿಳಿವಳಿಕೆ ಮುಖ್ಯವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ಮಾತನಾಡಿ, ಮಹಿಳಾ ಗ್ರಾಮಸಭೆ ಉದ್ದೇಶಗಳು, ಗ್ರಾಪಂ ಮಟ್ಟದಲ್ಲಿ ಮಹಿಳೆಯರಿಗೆ ಇರುವ ಸೌಲಭ್ಯಗಳು ಹಾಗೂ ಮಹಿಳೆಯರಿಗೆ ಶಿಕ್ಷಣ ಮಹತ್ವದ ಬಗ್ಗೆ ಮಾತನಾಡಿದರು.
ಗ್ರಾಪಂ ಅಧ್ಯಕ್ಷರಾದ ಮಂಜುಳಾ ಶಿವಪ್ಪ ಹತ್ತಿಮರದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಉಪಾಧ್ಯಕ್ಷರಾದ ಗೌಸ್ ಸಾಬ್ ತಾಳಕೇರಿ, ಸದಸ್ಯರಾದ ಮೇರಾಜ್ ದಳಪತಿ, ಹೊನ್ನುರಬೀ, ಹುಸೇನಪ್ಪ ಬಂಡೇ ನಾಯಕ, ಶಾಂತಮ್ಮ, ನಿರ್ಮಲ ಸಿದ್ದನಗೌಡ, ಕಾರ್ಯದರ್ಶಿ ಈಶಪ್ಪ, ಪಂಪಣ್ಣ, ಸಂಗಪ್ಪ, ರಾಜಮ್ಮ, ಮಹಿಳಾ ಸ್ವಸಹಾಯ ಸಂಘದ ಒಕ್ಕೂಟದ ಅಧ್ಯಕ್ಷರಾದ ಕವಿತಾ, ಎಂ.ಬಿ.ಕೆ ನಾಗರತ್ನ ಸೇರಿ ಗ್ರಾಪಂ ಸಿಬ್ಬಂದಿಗಳು, ಸ್ವಸಹಾಯ ಸಂಘದ ಮಹಿಳೆಯರು, ಗ್ರಾಮಸ್ಥರು ಇದ್ದರು.