ಗಂಗಾವತಿ: ದಾಖಲಾತಿ ಆಂದೋಲನದಿಂದ ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಗೆ ಹೊಸ ಜೀವ

ಗಂಗಾವತಿ, ಜು.23: ಕಳೆದ ವರ್ಷ ಕೇವಲ ನಾಲ್ಕು ವಿದ್ಯಾರ್ಥಿಗಳ ದಾಖಲಾತಿಯಿದ್ದ ಕಾರಣ ಮುಚ್ಚುವ ಹಂತಕ್ಕೆ ತಲುಪಿದ್ದ ನಗರದ ಗುಂಡಮ್ಮ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಸ್ಥಳೀಯ ಯುವಕರ ತಂಡ ಹಾಗೂ ಶಿಕ್ಷಕರ ಜಂಟಿ ಪ್ರಯತ್ನದಿಂದ ದಾಖಲಾತಿ ಆಂದೋಲನ ನಡೆಸಿ ಉಳಿಸಿರುವುದು ಶ್ಲಾಘನೀಯ ಕಾರ್ಯ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಂಪನ್ಮೂಲ ವ್ಯಕ್ತಿ ಧನರಾಜ್ ಈ. ಹೇಳಿದರು.
ಗುಂಡಮ್ಮ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯ ಸ್ಥಿತಿಗತಿಗಳನ್ನು ಪರಿಶೀಲಿಸಿದ ಅವರು, ಹಿರಿಯರಾದ ಎಚ್. ಮಲ್ಲಿಕಾರ್ಜುನ ಹೊಸಕೇರಾ ಅವರ ನೇತೃತ್ವದ ಯುವಕರ ತಂಡ ಹಾಗೂ ಶಿಕ್ಷಕರೊಂದಿಗೆ ಚರ್ಚೆ ನಡೆಸಿದರು. ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಧನರಾಜ್ ಈ., “ರಾಜ್ಯದಲ್ಲಿ ಕಳೆದ ಒಂದು ದಶಕದಲ್ಲಿ ದಾಖಲಾತಿ ಕುಸಿತದ ಹಿನ್ನೆಲೆಯಲ್ಲಿ ಸುಮಾರು 3,617 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಇದೀಗ ಮತ್ತಷ್ಟು 676 ಶಾಲೆಗಳು ವಿಲೀನದ ಹಂತದಲ್ಲಿರುವುದು ವಿಷಾದನೀಯ. ಇಂತಹ ಪರಿಸ್ಥಿತಿಯನ್ನು ತಡೆಯಲು ಸ್ಥಳೀಯ ಜನತೆ, ಯುವಕರು ಹಾಗೂ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯ. ಕೇವಲ ಚರ್ಚೆಗಳಿಂದಲ್ಲ, ಕಾರ್ಯಪ್ರವೃತ್ತಿಯಿಂದಲೇ ಸರ್ಕಾರಿ ಶಾಲೆಗಳನ್ನು ಉಳಿಸಬಹುದು,” ಎಂದು ಹೇಳಿದರು.
ಕಲ್ಯಾಣ ಕರ್ನಾಟಕದಂತಹ ವಿಶಿಷ್ಟ ಸಾಮಾಜಿಕ ಹಿನ್ನೆಲೆಯ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳ ಅಸ್ತಿತ್ವ ಮತ್ತು ಅಭಿವೃದ್ಧಿ ಅತ್ಯಂತ ಅಗತ್ಯವಾಗಿದೆ. ಕೇವಲ ಭೌತಿಕ ಸೌಲಭ್ಯಗಳಿಗಿಂತ ಗುಣಮಟ್ಟದ ಶಿಕ್ಷಣ ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಯುವಕರ ತಂಡ ಹಾಗೂ ಶಾಲಾ ಶಿಕ್ಷಕರು ದಾಖಲಾತಿ ಆಂದೋಲನದ ಮೂಲಕ ಶಾಲೆಯನ್ನು ಪುನಶ್ಚೇತನಗೊಳಿಸಲು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯವಾಗಿದೆ. ಶಾಲೆಯ ಬೋಧನೆ ಹಾಗೂ ಬೋಧನೇತರ ಚಟುವಟಿಕೆಗಳ ಉನ್ನತೀಕರಣಕ್ಕಾಗಿ ಇಲಾಖೆಯ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸನಿಕ್, ಉಲ್ಹಾಸ್, ಗಣೇಶ್, ಮಹೇಶ್ ನಾಯಕ್, ಸಾಯಿಶಂಕರ್, ಮುಖ್ಯಗುರು ಶ್ರೀನಿವಾಸ್ ಹಾಗೂ ಶಿಕ್ಷಕರಾದ ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


