The hidden talent of the youth will come out through such programs - Amjad Patel
ಯುವ ಸೌರಭ ಕಾರ್ಯಕ್ರಮ

ಕೊಪ್ಪಳ ಅಕ್ಟೋಬರ್ 28 (ಕರ್ನಾಟಕ ವಾರ್ತೆ): ಯುವಕರಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಲು ಯುವ ಸೌರಭದಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದ್ದು, ಯುವಕರಲ್ಲಿ ಅಡಗಿರುವ ಪ್ರತಿಭೆಗಳು ಇಂತಹ ಕಾರ್ಯಕ್ರಮಗಳ ಮೂಲಕ ಹೊರಬರಲಿವೆ ಎಂದು ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಹೇಳಿದರು.
ಅವರು ಮಂಗಳವಾರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣ ಕೊಪ್ಪಳದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಪ್ಪಳ ಸಾಂಸ್ಕೃತಿಕ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಯುವ ಸೌರಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಲೆ, ಸಂಸ್ಕೃತಿ ಹಾಗೂ ತಂತ್ರಜ್ಞಾನದಲ್ಲಿ ನಮ್ಮ ದೇಶದ ಯುವಕರು ಮುಂಚುಣಿಯಲ್ಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶವಾಗಿದ್ದು ಇಲ್ಲಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬಾಳುತ್ತಿದ್ದೆವೆ. ಸರ್ಕಾರ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳು ದೇಶದ ಭವಿಷ್ಯ ನಿರ್ಮಿಸುವ ನಮ್ಮ ಸಮಾಜದ ಶಕ್ತಿ ಆಗಿದ್ದಾರೆ. ಹೆಣ್ಣು ಕಲಿತರೆ ಕುಟುಂಬ ಹಾಗೂ ಸಮಾಜ ಕಲಿತ ಹಾಗೆ ಎಂದು ಹೇಳಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀ ನಿವಾಸ ಮಾತನಾಡಿ ನಮ್ಮ ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ಸರ್ಕಾರ ಯುವಕರ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಹಾಸ್ಟೆಲ್ ಸೌಲಭ್ಯ. ಲ್ಯಾಪ್ಟಾಪ್ ವಿತರಣೆ. ಡಿಗ್ರಿ ಹಾಗೂ ಡಿಪ್ಲೊಮಾ ಪಾಸಾದ ಯುವಕರಿಗೆ ಯುವನಿಧಿ ಯೋಜನೆಗಳಂತಹ ಹಲವಾರು ಸೌಲಭ್ಯಗಳನ್ನು ನೀಡುವ ಮೂಲಕ ಅವರ ಕಲಿಕೆಗೆ ಒತ್ತು ನೀಡುತ್ತಿದ್ದು ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಚೆನ್ನಾಗಿ ಕಲಿತು ತಮ್ಮ ತಂದೆ- ತಾಯಿಯರಿಗೆ ಒಳ್ಳೆಯ ಹೆಸರು ತರಬೇಕೆಂದು ಹೇಳಿದರು.
ಹಿರಿಯ ಸಾಹಿತಿಗಳು ಹಾಗೂ ಸಾಂಸ್ಕೃತಿಕ ಚಿಂತಕರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ಯುವ ಸೌರಭ ಕಾರ್ಯಕ್ರಮ ಚೆನ್ನಾಗಿ ಆಯೋಜನೆ ಮಾಡಲಾಗಿದೆ. ಸಂಸ್ಕೃತಿ ನಮ್ಮ ನಡೆ ನುಡಿಗಳಲ್ಲಿ ವ್ಯಕ್ತವಾಗುವಂತಹದ್ದು. ಮಾನವ ಕುಲಂ ತಾನೊಂದೆವಲಂ. ನಮ್ಮ ಕನ್ನಡ ಸಂಸ್ಕೃತಿ ಸಕಲ ಜಾತಿ ಜನಾಂಗದಿಂದ ಕೂಡಿ ಹೋಗುವುದೇ ನಮ್ಮ ಕನ್ನಡ ಸಂಸ್ಕೃತಿ. ಕವಿಗಳು. ದಾಸರು. ತತ್ವ ಪದಕಾರರು ಸಾಂಸ್ಕೃತಿಕ ವಕ್ತಾರರಾಗಿದ್ದಾರೆ. ಶಿಶುನಾಳ ಶರೀಫ ಸಾಹೇಬರು. ಕಡಕೋಳ ಮಡಿವಾಳರು ಜಾತಿ ಬೇದ ಏಣಿಸದ ಮಾಹಾನ್ ನೇತಾರರು ಎಂದರು.
ಮಾನವೀಯತೆಯನ್ನು ನಾವೆಲ್ಲರೂ ಬೆಳೆಸಿಕೊಂಡು ಹೋಗಬೇಕಿದೆ. ನಮ್ಮ ಶರಣರಿಗೆ ಮಹತ್ವ ಏಕಿದೆ ಎಂದರೆ ಅವರು ನುಡಿದಂತೆ ನಡೆದರು. ಮಕ್ಕಳು ಓದುವುದರ ಜೊತೆಗೆ ಮನೆಯ ಕೆಲಸ ಕಾರ್ಯಗಳನ್ನು ಮಾಡಿ ಶ್ರಮವನ್ನು ಹಂಚಿಕೊಂಡು ತಮ್ಮ ತಂದೆ- ತಾಯಿಯವರ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡಬೇಕು. ಕನ್ನಡ ಜೊತೆಗೆ ತಮಿಳು. ತೆಲಗು. ಮರಾಠಿ ಎಷ್ಟು ಭಾಷೆಗಳನ್ನು ಕಲಿತರು ಸಂತೋಷ ಆದರೆ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮಾತನಾಡಿ, ಯುವಕರ ಮೇಲೆ ಸರಕಾರ ಬಹಳಷ್ಟು ಭರವಸೆಗಳನ್ನು ಇಟ್ಟುಕೊಂಡು ಅವರ ಕಲಿಕೆಗೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಯುವ ಪ್ರತಿಭೆ ಹಾಗೂ ಅವರ ಕೌಶಲ್ಯಗಳನ್ನು ಹೊರ ತರಲು ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಮಹಿಳಾ ಕಾಲೇಜಿನಲ್ಲಿ ಯುವ ಸೌರಭದಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ವಿಶೇಷವಾಗಿದೆ ಎಲ್ಲರೂ ತಮ್ಮ ಕಲಿಕೆಯ ಜೊತೆಗೆ ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಗಳ ಪ್ರದರ್ಶನ ನೀಡಬೇಕೆಂದು ಹೇಳಿದರು.
ಸುಗಮ ಸಂಗೀತ, ಜಾನಪದ ಗೀತೆಗಳು ಮತ್ತು ಸಮೂಹ ನೃತ್ಯ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಿವಿ ಜಡಿಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಚಾಂದಪಾಷಾ ಕಿಲ್ಲೆದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಕರ್ಣಕುಮಾರ, ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣಪತಿ ಕೆ. ಲಮಾಣಿ, ನಿವೃತ್ತ ಪಾಂಶುಪಾಲರಾದ ಬಿ.ಜಿ. ಕರಿಗಾರ, ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಹುಲಿಗೆಮ್ಮ ಸೇರಿದಂತೆ ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka
