Health and Family Welfare Department urged to control the increasing number of fake specialists in the skin, hair and transplant sectors

ಬೆಂಗಳೂರು,ಜು.29: ಚರ್ಮ ಸಂಬಂಧಿ ಹಾಗು ಕೂದಲು-ಕಸಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ನಕಲಿ ತಜ್ಞರನ್ನು ನಿಯಂತ್ರಿಸುವಂತೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಐಎಡಿವಿಎಲ್- ಚರ್ಮ ತಜ್ಞರ ಸಂಘದ ಕರ್ನಾಟಕ ಶಾಖೆ ಒತ್ತಾಯಿಸಿದೆ.
ಚರ್ಮದ ಸಮಸ್ಯೆಗೆ ಜೊತೆಗೆ ಅವೈಜ್ಞಾನಿಕವಾಗಿ ಕೂದಲು ಕಸಿ ಮಾಡುವುದಾಗಿ ಜನ ಸಾಮಾನ್ಯರನ್ನು ಯಾಮಾರಿಸುತ್ತಿದ್ದು, ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಶಿವಕುಮಾರ್ ಕೆ.ಬಿ., ಉಪ ನಿರ್ದೇಶಕ ವಿವೇಕ್ ದೊರೈ, ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಚರ್ಮರೋಗ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ನಕಲಿ ತಜ್ಞರ ಹಾವಳಿ ಮತ್ತು ಅದರ ಗಂಭೀರ ಸಾರ್ವಜನಿಕ ಆರೋಗ್ಯದ ಮೇಲಿನ ದುಷ್ಪರಿಣಾಮಗಳ ಬಗ್ಗೆ ನಿಯೋಗ ಕಳವಳ ವ್ಯಕ್ತಪಡಿಸಿತು.
ಐಎಡಿವಿಎಲ್-ಕೆಎನ್ನ ಅಂಟಿಕ್ವ್ಯಾಕರಿ ಮತ್ತು ಕಾನೂನು ವಿಭಾಗವು ಕರ್ನಾಟಕದಾದ್ಯಂತ 65 ಕ್ಕೂ ಅಧಿಕ ನಕಲಿ ಚರ್ಮ ಕ್ಲಿನಿಕ್ಗಳ ಬಗ್ಗೆ ಸ್ಪಷ್ಟ ದಾಖಲೆಗಳನ್ನು ಸಂಗ್ರಹಿಸಿದೆ. ಈ ಚರ್ಮ ಕ್ಲಿನಿಕ್ಗಳನ್ನು, ದಂತಚಿಕಿತ್ಸಕರು, ಬ್ಯೂಟಿಷಿಯನ್ಗಳು, ಸ್ಥಳೀಯ ಧಾರಾವಾಹಿ ನಟಿಯರು ಹಾಗೂ ಕೇವಲ ಹತ್ತನೇ ಅಥವಾ ಹನ್ನೆರಡನೇ ತರಗತಿವರೆಗೆ ಶಿಕ್ಷಣ ಪಡೆದ ವ್ಯಕ್ತಿಗಳು ನಕಲಿ ಪ್ರಮಾಣಪತ್ರಗಳು ಹಾಗೂ ಮಾನ್ಯತೆ ಇಲ್ಲದ ಪದವಿಗಳನ್ನು ಬಳಸಿ ನಡೆಸುತ್ತಿದ್ದಾರೆ ಎಂದು ನಿಯೋಗ ಆರೋಪಿಸಿದೆ.
ಈ ಮಂಡಳಿಯನ್ನು ಐಎಡಿವಿಎಲ್-ಕೆಎನ್ ಅಧ್ಯಕ್ಷರಾದ ಡಾ. ಮಂಜುನಾಥ ಹುಲ್ಮನಿ ನೇತೃತ್ವ ವಹಿಸಿದ್ದು, ಡಾ. ಮಹೇಶ್ ಕುಮಾರ್ ಸಿ (ಮಾನ್ಯ ಕಾರ್ಯದರ್ಶಿ), ಡಾ. ಸುಜಲಾ ಸಚ್ಚಿದಾನಂದ ಆರಾಧ್ಯ (ಮಾನ್ಯ ಖಜಾಂಚಿ), ಹಿರಿಯ ತಜ್ಞರುಗಳಾದ ಡಾ. ವೆಂಕಟ್ರಾಮ್ ಮೈಸೂರು ಮತ್ತು ಡಾ. ಜಗದೀಶ್ ಪಿ, ಹಾಗೂ ಡಾ. ಅಕ್ಷಯ್ ಸಾಮಗಾನಿ – ಅಂಟಿಕ್ವ್ಯಾಕರಿ ಮತ್ತು ಕಾನೂನು ವಿಭಾಗದ ಸಂಚಾಲಕರು ಇದ್ದರು.
ಮನವಿ ಸ್ವೀಕರಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಶಿವಕುಮಾರ್, ಇಂತಹ ನಿಯಂತ್ರಣವಿಲ್ಲದ ಕ್ಲಿನಿಕ್ಗಳ ವ್ಯಾಪಕ ಜಾಲದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸಾರ್ವಜನಿಕ ಆರೋಗ್ಯಕ್ಕೆ ಇದು ಉಂಟುಮಾಡಬಹುದಾದ ಅಪಾಯಗಳನ್ನು ತಪಿಸಬೇಕಾಗಿದೆ. ಇದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಈ ನಿಟ್ಟಿನಲ್ಲಿ ಸಾರ್ವಜನಿಕರ ನಡುವೆ ಜಾಗೃತಿ ಮೂಡಿಸುವ ಅಗತ್ಯವಿದೆ. ಔಷಧಿ ಅಥವಾ ಚಿಕಿತ್ಸೆ ಪಡೆಯುವ ಮೊದಲು ನಿಮ್ಮ ಚರ್ಮರೋಗ ತಜ್ಞರ ವಿದ್ಯಾರ್ಹತೆಗಳನ್ನು ಪರಿಶೀಲಿಸುವುದು ಅವಶ್ಯಕ.ಈ ನಕಲಿ ವೈದ್ಯರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸ್ಥಳೀಯ ರಾಜಕೀಯ ಒತ್ತಡ ಇರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿ, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಶಾಶ್ವತ ಪರಿಹಾರವನ್ನು ರೂಪಿಸಬೇಕೆಂದು ಒತ್ತಾಯಿಸಿತು.