Hamsalekha Birthday Celebration at Parashurama Karaoke Studio

ಗಂಗಾವತಿ: ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯನ ಮತ್ತು ಸಂಗೀತಕ್ಕೆ ತಮ್ಮದೇ ಆಗಿರುವ ಕೊಡುಗೆ ನೀಡುವ ಮೂಲಕ ಹಂಸಲೇಖ ಅವರು ಜನಸಾಮಾನ್ಯರ ಸಂಗೀತ ನಿರ್ದೇಶಕರಾಗಿದ್ದಾರೆಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಹಾಗೂ ಪತ್ರಕರ್ತ ಕೆ.ನಿಂಗಜ್ಜ ಹೇಳಿದರು.
ಅವರು ನಗರದ ಹೊಸಳ್ಳಿ ರಸ್ತೆಯಲ್ಲಿರುವ ಪರಶುರಾಮ ಕರೋಕೆ ಸ್ಟುಡಿಯೋದಲ್ಲಿ ಸಂಗೀತ ಸ್ವರಾಂಜಲಿ ಕಲಾ ತಂಡದ ವತಿಯಿಂದ ಆಯೋಜಿಸಿದ್ದ ಹಂಸಲೇಖ ಅವರ 74 ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದು.
ಸಿನೆಮಾ ಹಾಡುಗಳಿಗೆ ಜನಪದ ಮತ್ತು ದೇಶಿಯ ಟಚ್ ಕೊಡುವ ಮೂಲಕ ಜನರು ಹಂಸಲೇಖ ಅವರ ಹಾಡುಗಳನ್ನು ತಮ್ಮವೆಂದು ಹೇಳುವಂತೆ ಮಾಡಿದ ಸಂಗೀತ ಮಾಂತ್ರಿಕರಾಗಿದ್ದು ಹೊಸ ಹೊಸ ಪ್ರತಿಭೆಗಳಿಗೆ ಹಾಡಲು ಅವಕಾಶ ನೀಡುವ ಮೂಲಕ ಕನ್ನಡ ಸಿನೆಮಾ ಹಿನ್ನೆಲೆ ಗಾಯಕರನ್ನು ಸೃಷ್ಠಿಸಿದ ಕೀರ್ತಿ ಹಂಸಲೇಖ ಅವರಿಗೆ ಸಲ್ಲುತ್ತದೆ. ನೂತನ ಪ್ರಯೋಗದ ಮೂಲಕ ಕನ್ನಡ ಹಿನ್ನೆಲೆ ಗಾಯಕವನ್ನು ಜನಪ್ರಿಯಗೊಳಿಸಿದ್ದು ಕನ್ನಡ ಭಾಷೆ, ನೆಲ, ಜಲ ಸಮಸ್ಯೆ ಬಂದಾಗ ತಕ್ಷಣ ಸ್ಪಂದಿಸಿ ಕನ್ನಡ ಭಾಷಾ ಪ್ರೇಮಿಯಾಗಿದ್ದಾರೆಂದರು.
ಹಿನ್ನೆಲೆಗಾಯಕ ಪರಶುರಾಮ ದೇವರಮನೆ ಮಾತನಾಡಿ, ಹಂಸಲೇಖ ಅವರು ಕನ್ನಡ ಶ್ರೇಷ್ಠ ಸಂಗೀತ ನಿರ್ದೇಶಕರಾಗಿದ್ದುಅತ್ಯುತ್ತಮ ಹಾಡುಗಳನ್ನು ಬರೆಯುವ ಮೂಲಕ ಪ್ರತಿಭೆ ಮೆರೆದಿದ್ದು ಅವರ ಜನ್ಮದಿನವನ್ನು ಆಚರಣೆ ಮಾಡುವ ಮೂಲಕ ಹವ್ಯಾಸಿ ಕಲಾವಿದರಿಗೆ ಪ್ರೋತ್ಸಾಹಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಹಂಸಲೇಖ ಅವರ ಹೆಸರಿನಲ್ಲಿ ಸ್ಥಳೀಯ ಕರೋಕೆ ಕಲಾವಿದರ ಸಹಕಾರದಲ್ಲಿ ಕರೋಕೆ ಗಾಯನ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಗೀತ ಸ್ವರಾಂಜಲಿ ಕಲಾ ತಂಡದ ಪರಶುರಾಮ ದೇವರಮನೆ, ಹನುಮಂತಪ್ಪ ಹುಲಿಹೈದರ್, ತಿಪ್ಪೇಸ್ವಾಮಿ ಹೊಸಮಠ, ಪೋಲಕಾಲ್ ಯಲ್ಲಪ್ಪ, ವಿರೇಶಸ್ವಾಮಿ, ಧೂಳ್ ವೆಂಕಟೇಶ, ಕುರುಗೋಡು ವೆಂಕಟೇಶ,ಕನಕಪ್ಪ ಹೊಸಳ್ಳಿ, ಆನಂದ ಪೇಂಟರ್,ರಾಜು ಹೊಸಳ್ಳಿ, ಗಿರಿಜಮ್ಮ, ವಿಜಯಲಕ್ಷ್ಮಿ, ವಿರೂಪಾಕ್ಷಪ್ಪ ಶಿರವಾರ, ರಮೇಶ ಐಲಿ, ಪ್ರವೀಣ ಸೇರಿ ಅನೇಕರಿದ್ದರು.