This video is going viral on social media.
ಅನೇಕರು ‘ಇಲ್ಲಿ ನೋಡಿ’ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಎಲ್ಲಾ ನಾಯಕರು ಹೇಗೆ ಒಂದೇ ಕಡೆ ಸೇರಿದ್ದಾರೆ, ಎಷ್ಟು ಖುಷಿಯಾಗಿದ್ದಾರೆ,
ಕೈಕೈ ಹಿಡಿದು ನಗುತ್ತಾ ಮಾತನಾಡುತ್ತಿದ್ದಾರೆ, ಒಂದೇ ಟೇಬಲ್ ನಲ್ಲಿ ಕೂತು ಊಟ ಮಾಡುತ್ತಿದ್ದಾರೆ,ಯಾವತ್ತಿದ್ರು ಈ ರಾಜಕಾರಣಿಗಳೆಲ್ಲ ಒಂದೇ, ಕಾರ್ಯಕರ್ತರು ಮಾತ್ರ ಪರಸ್ಪರ ಬಡಿದಾಡಿಕೊಂಡು ದ್ವೇಷ ಕಾರುತ್ತಾ ಸಾಯುತ್ತಿದ್ದಾರೆ ಅನ್ನೋ ಅರ್ಥದಲ್ಲಿ
ಯಡ್ಡಿಯೂರಪ್ಪ ಅವರ ಮೊಮ್ಮಗಳ ಮದುವೆಯಲ್ಲಿ ಆಹ್ವಾನದ ಮೇರೆಗೆ ಬಂದ ಇತರೆ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಸೇರಿದ್ದು ದೊಡ್ಡ ಸಾಮಾಜಿಕದ್ರೋಹ ಅನ್ನುವ ರೀತಿಯಲ್ಲಿ ಹಲವಾರು ಟ್ಯಾಗ್ ಲೈನ್ ಗಳ ಮೂಲಕ ಟೀಕಿಸಲಾಗುತ್ತಿದೆ ಮತ್ತು ಟ್ರೋಲ್ ಮಾಡಲಾಗುತ್ತಿದೆ..
ನಮ್ಮಲ್ಲಿ political literacy ಕಡಿಮೆ ಇದೆ ಅನ್ನೋದನ್ನು ಇದು ಸಾಬೀತುಪಡಿಸುತ್ತೆ. ನಮ್ಮಲ್ಲಿ ರಾಜಕೀಯ ಪ್ರಜ್ಞೆ ಬಲಗೊಳ್ಳುತ್ತಿಲ್ಲ, ರಾಜಕಾರಣವನ್ನು ನೋಡುವ ದೃಷ್ಟಿಕೋನವೇ ನಮಗೆ ಗೊತ್ತಿಲ್ಲ, ರಾಜಕಾರಣಕ್ಕೂ ಮತ್ತು ಸಿದ್ದಾಂತಕ್ಕೂ ಇರುವ ವ್ಯತ್ಯಾಸಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ನಾವು ಎಡವುತ್ತಿದ್ದೇವೆ ಅನ್ನೋದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ..
ಯಡ್ಡಿಯೂರಪ್ಪನವರು ನಮ್ಮದೇ ರಾಜ್ಯದ ನಮ್ಮದೇ ಕನ್ನಡ ನೆಲದ ಮಾಜಿ ಮುಖ್ಯಮಂತ್ರಿಗಳು ಮತ್ತು
ಅವರ ಮಕ್ಕಳು ಹಾಲೀ ಶಾಸಕರು ಸಂಸದರು ಆಗಿದ್ದಾರೆ ಅನ್ನುವುದನ್ನು ಪಕ್ಕಕ್ಕಿಟ್ಟು ನೋಡಿದರೂ ಅವರು ಸಾಮಾಜಿಕ ಜೀವನದಲ್ಲಿರುವ ನಮ್ಮ ನಿಮ್ಮಂತೆಯೇ ನಾಗರೀಕರು ಅನ್ನೋದನ್ನು ಮೊದಲು ಅರ್ಥಮಾಡಿಕೊಳ್ಳಬೇಕು.
ಸಮಾಜವಾದ ಮತ್ತು ಸಮಾನತೆಯ ಆಶಯವನ್ನು ಎತ್ತಿಹಿಡಿಯುವ ಸಂವಿಧಾನ ಜಾರಿಯಲ್ಲಿರುವ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳು ಇರಬೇಕಾಗಿರುವುದೇ ಹೀಗೆಯೇ ಅಲ್ವೇ. ಅಥವಾ ಅವರು ಒಬ್ಬರಿಗೊಬ್ಬರು ಎದುರಾದ ತಕ್ಷಣ ಕತ್ತಿ ಮಚ್ಚು ಹಿಡಿದು ಪರಸ್ಪರ ಹೊಡೆದಾಡಬೇಕೆ?. ಪ್ರಜಾಪ್ರಭುತ್ವದಲ್ಲಿ ಅದರಲ್ಲೂ electoral democracy ಯಲ್ಲಿ ಅನೇಕ ಪಕ್ಷಗಳು, ಚುನಾವಣೆಗಳು, ಪರ ವಿರೋಧ ಇವೆಲ್ಲವೂ
ಇರಲೇಬೇಕು. ಚುನಾಯಿತರಾಗಿ ಆಡಳಿತ ನಡೆಸುವ ಸರ್ಕಾರಗಳು ತಪ್ಪು ಮಾಡಿದಾಗ ಅವರನ್ನು ಬಡಿದೆಚ್ಚರಿಸಲೆಂದೇ ವಿರೋಧಪಕ್ಷಕ್ಕೆ ಸಾಂವಿಧಾನಿಕ ಜವಾಬ್ದಾರಿಗಳನ್ನು ನೀಡಿ ವಿರೋಧ ಪಕ್ಷದ ನಾಯಕನನ್ನು ಕೂಡ ನೇಮಿಸಲಾಗಿರುತ್ತೆ. ಆಡಳಿತ ಪಕ್ಷವನ್ನು ಟೀಕೆ ಮಾಡುವುದು, ವಿರೋಧಿಸುವುದು, ಪ್ರಶ್ನಿಸುವುದು ಇವೆಲ್ಲವೂ beauty of democracy.
(ಇನ್ನೊಂದು ಕಡೆ ಸರ್ಕಾರವನ್ನು ಪ್ರಶ್ನಿಸಿದವರ ಮೇಲೆ UAPA ದೇಶದ್ರೋಹದ ಕೇಸ್ ದಾಖಲಿಸಿ ಅವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಅದು ಇನ್ನೊಂದು ಚರ್ಚೆ, ವಿಷಯವನ್ನು Digress ಮಾಡಬಾರದು ಎನ್ನುವ ಕಾರಣಕ್ಕೆ ಅದನ್ನಿಲ್ಲಿ ಮುಂದುವರೆಸುತ್ತಿಲ್ಲ.).
ರಾಜಕಾರಣವನ್ನು ಹೊರತುಪಡಿಸಿ ಅವರೆಲ್ಲರೂ ಕೂಡ ವೈಯಕ್ತಿಕವಾಗಿ ಸ್ನೇಹ ಸಂಬಂಧವನ್ನು ಹೊಂದುವುದೇ ಅಪರಾಧ ಎನ್ನುವ ಅರ್ಥದಲ್ಲಿ ಚರ್ಚೆಗಳು ನಡೆಯುತ್ತಿರುವುದು ತೀರಾ ಇತ್ತೀಚಿನ ದಿನಗಳಲ್ಲಿ. ಈ ವಿಡಿಯೋದಲ್ಲಿರುವ ಘಟಾನುಘಟಿ ರಾಜಕಾರಣಿಗಳಿಂದ ನಮ್ಮಂತಹ ಸಾಮಾನ್ಯ ನಾಗರೀಕರು ಅಥವಾ ಕಾರ್ಯಕರ್ತರು ನಿಜವಾಗಿಯೂ ಕಲಿಯಬೇಕಾದದ್ದು ಇದನ್ನೇ. ನಮ್ಮ ದಿನನಿತ್ಯದ ರಾಜಕಾರಣದಲ್ಲಿ ನಾವುಗಳು ಕೂಡ ಚರ್ಚೆಯ ಹೊರತಾಗಿಯೂ, ಪರ ವಿರೋಧದಂತಹ ವಾದ ಪ್ರತಿವಾದದ ಹೊರತಾಗಿಯೂ ನಾವೆಲ್ಲರೂ ವೈಯಕ್ತಿಕವಾಗಿ ಒಂದೊಳ್ಳೆ ಸ್ನೇಹ ಸಂಬಂಧವನ್ನು ಹೊಂದಬಹುದು, ಪರಸ್ಪರ ಗೌರವಿಸಬಹುದು..
ಆದರೆ ನಮ್ಮಲ್ಲಿ ಯಾಕೆ ಇಂಥಹ ಪ್ರಜಾಪ್ರಭುತ್ವ ಮೌಲ್ಯಗಳನ್ನು ಟೀಕಿಸಲಾಗುತ್ತಿದೆ. ಮತ್ತು ಚುನಾವಣೆಯಲ್ಲಿ ಮತ್ತು ಅಧಿವೇಶನದಲ್ಲಿ, ಸಂಸತ್ತಿನಲ್ಲಿ ಮತ್ತು ಮಾಧ್ಯಮದ ಮುಂದೆ ಕಿತ್ತಾಡುವ ರಾಜಕಾರಣಿಗಳನ್ನು ಪ್ರೇರಣೆಗೆ ತೆಗೆದುಕೊಂಡು ಚರ್ಚೆ ದಿಕ್ಕುತಪ್ಪುತ್ತಿದೆ, ಮಾತುಗಳು ಅತಿರೇಕವಾಗುತ್ತಿದೆ, ರಾಜಕಾರಣದಲ್ಲಿ ಧರ್ಮವು ಬೆರೆಯುತ್ತಿದೆ, ಅದು ಕ್ರಮೇಣ ಕೋಮುವಾದವಾಗಿ ಬದಲಾಗಿ ಮನುಷ್ಯರನ್ನೇ ಬಲಿತೆಗೆದುಕೊಳ್ಳುವಷ್ಟರ ಮಟ್ಟಿಗೆ ವ್ಯಾಘ್ರವಾಗುತ್ತಿದೆ..
ಯಡ್ಡಿಯೂರಪ್ಪ ಅವರ ಮೊಮ್ಮಗಳ ಮದುವೆಯಲ್ಲಿ
ಪರಸ್ಪರ ಜೊತೆಗೆಕೂತು, ಕೈಕೈ ಹಿಡಿದು, ಖುಷಿಯಾಗಿ ನಗಾಡುತ್ತ ಒಂದೇ ಟೇಬಲ್ ನಲ್ಲಿ ಊಟ ಮಾಡುತ್ತಿರುವ ರಾಜಕಾರಣಿಗಳನ್ನು ನಾವು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು, ಪ್ರಜಾಪ್ರಭುತ್ವದಲ್ಲಿ ಪಕ್ಷಗಳು ಇರಬೇಕಾಗಿರುವುದು ಹೀಗೆಯೇ. ಅದನ್ನು ಬಿಟ್ಟು ಮಾಧ್ಯಮದ ಮುಂದೆ ಬಂದು ದೇಶದ ಅಥವಾ ರಾಜ್ಯದ ಅಭಿವೃದ್ಧಿಯ ಕುರಿತು ಒಂದೇ ಒಂದು ಮಾತನ್ನಾಡದೆ ಸಾಮಾನ್ಯ ಜನರನ್ನು ಪ್ರಚೋದಿಸುವುದಕ್ಕಾಗಿಯೇ 24 ಗಂಟೆ ದೇಶ ಧರ್ಮ ಮತ್ತು ಇನ್ನೊಬ್ಬ ರಾಜಕಾರಣಿಗಳ ಮೇಲಿನ ವೈಯಕ್ತಿಕ ದಾಳಿ ತೇಜೋವಧೆ ಇಂಥವುಗಳಿಂದ ನಾವು ಪ್ರಚೋದನೆಗೊಳ್ಳುತ್ತಿದ್ದೇವೆ ಅದು ನಿಲ್ಲಬೇಕು.
ನಾವುಗಳು ಕೂಡ ದಿನನಿತ್ಯದ ರಾಜಕಾರಣದ ನಡುವೆಯೂ ಪರಸ್ಪರ ಗೌರವಿಸುತ್ತಾ ಆರೋಗ್ಯಕರ ವಾತಾವರಣವನ್ನು ನಿರ್ಮಿಸುವುದನ್ನು ಕಲಿಯಬೇಕಿದೆ. ಪ್ರಜಾಪ್ರಭುತ್ವದ ಆಶಯವನ್ನು ಎತ್ತಿಹಿಡಿಯಬೇಕಿದೆ.
ಮುಖ್ಯವಾಗಿ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕಿದೆ.
ರುದ್ರು ಪುನೀತ್.
(ವಾಟ್ಸಪ್ ಕೃಪೆ)