Railway freight rank point inspection in Kotturu: MP Tukaram

ಸರಕು ಸಾಗಣಿಕೆ ರ್ಯಾಂಕ್ ಪಾಯಿಂಟ್ ಪರಿಶೀಲನೆ
ಕೊಟ್ಟೂರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯದ ಕೇಂದ್ರದ ಆವರಣದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಯಾಯಿತು. ಸಂಸದರಾದ ತುಕಾರಾಮ್ರವರು ಉದ್ಘಾಟನೆ ನೆರವೇರಿಸಿದರು. ಬಡ ಕಟ್ಟಡ ಮತ್ತು ಕೃಷಿ ಕಾರ್ಮಿಕರಿಗೆ ಮತ್ತು ಕೂಲಿಕಾರ್ಮಿಕರಿಗೆ ಇದರ ಸದುಪಯೋಗ ಪಡೆಯಬಹುದು. ನಂತರ ಕೊಟ್ಟೂರು ರೈಲ್ವೆ ನಿಲ್ದಾಣಕ್ಕೆ ಹೋಗಿ ರಸಗೊಬ್ಬರ ಮತ್ತು ಸರಕುಗಳನ್ನು ಲೋಡ್ ಮಾಡುವ ರ್ಯಾಕ್ ಪಾಯಿಂಟ್ ನಿರ್ಮಾಣ ಕಾಮಗಾರಿ ಪರಿಶೀಲನೆ ನಡೆಸಿದರು. ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಸಂಸದರು ಮಾತನಾಡುತ್ತಾ, ಇಂದಿರಾ ಕ್ಯಾಂಟಿನ್ ಮುಖ್ಯವಾಗಿ ಕೂಲಿ ಕಾರ್ಮಿಕರ, ಬಡವರ ಹಸಿವನ್ನು ನೀಗಿಸಲೆಂದು ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಹೇಳಿದ ಮಾತಿನಂತೆ ನಡೆದು ತೋರಿಸಿದ್ದೇವೆ. ಬಡ ಕೃಷಿ ಕೂಲಿ ಕಾರ್ಮಿಕರ ಹಸಿವನ್ನು ನೀಗಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ನಾನು ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳಿಗೆ ತಲಾ ೮೦ ಲಕ್ಷ ರೂ.ಗಳನ್ನು ಸಂಸದರ ಅನುದಾನ ಮೀಸಲಾಗಿರಿಸಿದ್ದೇನೆ. ಇದರಲ್ಲಿ ಅಂಗವಿಕಲರಿಗಾಗಿ ಬೈಕ್ಗಳನ್ನು ವಿತರಿಸಲಾಗುವುದು ಎಂದರು. ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವನ್ನು ೧೦೦ ಬೆಡ್ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತದೆ ಅಲ್ಲದೆ ಹೆಚ್ಚುವರಿಯಾಗಿ ಒಂದು ಅಂಬ್ಯುಲೆನ್ಸ್ನ್ನು ಕೂಡಾ ಒದಗಿಸಲಾಗುವುದು ಎಂದರು. ಅಲ್ಲದೇ ಈಗಾಗಲೇ ಕೊಟ್ಟೂರಿನಲ್ಲಿ ಮುಖ್ಯ ಅಂಚೆ ಕಛೇರಿ ಕಟ್ಟಡ ಮುಗಿಯುವ ಹಂತದಲ್ಲಿದ್ದು ಮುಂದಿನ ಒಂದು ತಿಂಗಳಲ್ಲೇ ಅದನ್ನೂ ಲೋಕಾರ್ಪಣೆಗೊಳಿಸಲಾಗುವುದು ಎಂದರು. ಮೊಳಕಾಲ್ಮೂರಿನಿಂದ ಹರಪನಹಳ್ಳಿಯವರೆಗೆ ರಾಷ್ಟ್ರೀಯ ಹೆದ್ದಾರಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಅವಿಭಜಿತ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಅಭಿವೃದ್ಧಿಗಾಗಿ ಒತ್ತುಕೊಡುತ್ತೇನೆ. ಸಾರ್ವಜನಿಕರ ಸಹಕಾರ ಮುಖ್ಯ ಎಂದರು. ಈ ಸಂದರ್ಭದಲ್ಲಿ ಎಂ.ಎಂ.ಜೆ.ಸತ್ಯಪ್ರಕಾಶ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪಿ.ಎಚ್.ದೊಡ್ಡರಾಮಣ್ಣ, ಕೆ.ಪಿ.ಸಿ.ಸಿ. ಸದಸ್ಯರಾದ ಗೂಳಿ ಮಲ್ಲಿಕಾರ್ಜುನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾರುಕೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಡಿಕೆ ಮಂಜುನಾಥ್, ಮಾಜಿ ಪ.ಪಂ. ಸದಸ್ಯ ಚಿರಿಬಿ ಕೊಟ್ರೇಶ್, ಕ.ರ.ವೇ. ಅಧ್ಯಕ್ಷ ಎಂ.ಶ್ರೀನಿವಾಸ್, ಬ್ಲಾಕ್ ಕಾರ್ಮಿಕ ವಿಭಾಗದ ಅಧ್ಯಕ್ಷ ಇಂದ್ರಜಿತ್ ಉಪಸ್ಥಿತರಿದ್ದರು.