There is no protection for sheep and cattle herders in the Ram government.

ಎಂ.ವಿ.ಜೋಷಿ
ಕೊಪ್ಪಳ: ಪಂಚ ಗ್ಯಾರಂಟಿಗಳ ಮೂಲಕ ರಾಜ್ಯದ ಮನೆ ಮನೆಯಲ್ಲೂ ಜನಪ್ರಿಯತೆ ಪಡೆದಿರುವ ಟಗರು ಸರ್ಕಾರದಲ್ಲಿ ಕುರಿ ಮತ್ತು ದನಗಾಹಿಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ರಾಸುಗಳ ಸಂರಕ್ಷಕರು ಮತ್ತು ಕೃಷಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕಿನ ಶಹಪುರ ಗ್ರಾಮದ ಮಲ್ಲಪ್ಪ ಕುರಿ, ಹನುಮಂತ ಕೋಮಲಾಪುರ, ಹನುಮಂತ ಬೂದಿಹಾಳ ಮತ್ತು ನಾಗಪ್ಪ ಕುರಿ ಇವರು ಕಳೆದ ಹಲವು ದಶಕಗಳಿಂದ ಕುರಿ ಮತ್ತು ದನಗಳನ್ನು ಸಾಕಿಕೊಂಡು ಬರುತ್ತಿದ್ದಾರೆ. ೪೦೦ ಕ್ಕೂ ಹೆಚ್ಚು ದನಕರುಗಳು ಮತ್ತು ೨೫೦ಕ್ಕೂ ಹೆಚ್ಚು ಕುರಿ, ಆಡುಗಳನ್ನು ಹೊಂದಿರುವ ರಾಸುಗಳ ಸಂರಕ್ಷಕರು ಪ್ರತಿದಿನ ಅಡವಿಯಲ್ಲಿಯೇ ಇವುಗಳನ್ನು ಸಂರಕ್ಷಿಸಿ, ಪೋಷಿಸುವ ಕಾಯಕದಲ್ಲಿ ಮಗ್ನರಾಗಿದ್ದಾರೆ.

ಟಗರು ಸರ್ಕಾರದಲ್ಲಿ ಇವರಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಮೇಲಾಗಿ ದನ, ಕರುಗಳು, ಕುರಿ, ಮೇಕೆಗಳಿಗೆ ಅನಾರೋಗ್ಯವಾದರೆ ಕನಿಷ್ಟ ಔಷಧಿಯೂ ದೊರೆಯುತ್ತಿಲ್ಲ. ಹೆಸರಿಗೆ ಮಾತ್ರ ಪಶು ಸಂಗೋಪನೆ ಇಲಾಖೆ ಇದೆ. ತಮ್ಮ ಜೀವರಾಶಿಗಳಿಗೆ ಅನಾರೋಗ್ಯ ಉಂಟಾದಾಗ ಪಶು ಸಂಗೋಪನೆ ಇಲಾಖೆಗೆ ತೆರಳಿ ಮನವಿ ಮಾಡಿದರೆ ಅಧಿಕಾರಿಗಳು, ವೈದ್ಯರು ಮತ್ತು ಸಿಬ್ಬಂದಿಗಳಿAದ ಕನಿಷ್ಟ ಸೌಜನ್ಯವೂ ಇಲ್ಲ. ಯಾವ ರೋಗಕ್ಕೆ ಏನು ಚಿಕಿತ್ಸೆ ನೀಡಬೇಕು? ಯಾವ ಔಷಧ ನೀಡಬೇಕು? ರಾಸುಗಳನ್ನು ಹೇಗೆ ಉಪಚರಿಸಬೇಕೆಂದೂ ಮಾರ್ಗದರ್ಶನ ಮಾಡುವುದಿಲ್ಲವೆಂದು ಟಗರು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕ್ಷೀಣಿಸುತ್ತಿರುವ ಉದ್ಯಮ:
ಶಹಪುರ ಗ್ರಾಮವೊಂದರಲ್ಲಿಯೇ ಈ ಮೊದಲು ೫೦ಕ್ಕೂ ಹೆಚ್ಚು ಕುಟುಂಬಗಳು ದನ ಕರುಗಳು, ಕುರಿ, ಮೇಕೆಗಳನ್ನು ಸಾಕಣೆ ಮಾಡುತ್ತಿದ್ದರು. ಅಂದಿಗಾಲೀಶ ಗುಡ್ಡ, ತಿರುಗಲ್ ತಿಮ್ಮಪ್ಪ ಬೆಟ್ಟ ಸೇರಿದಂತೆ ಗ್ರಾಮದ ಸುತ್ತಲಿನ ಗುಡ್ಡ, ಗಹ್ವರಗಳಲ್ಲಿ ಇವುಗಳನ್ನು ಒಂದೆಡೆ ಸೇರಿಸಿ ಹಟ್ಟಿ ಮಾಡಿಕೊಂಡಿದ್ದರು. ಗೋಮಾಳ ಜಾಗೆಯಲ್ಲಿ ರಾಸುಗಳನ್ನು ಕೂಡಿ ಹಾಕಿ ಹಾಲು, ಸೆಗಣಿ ಮಾರಾಟದಿಂದ ಜೀವನ ಮಾಡುತ್ತಿದ್ದರು. ದನಕರುಗಳಿಗೆ, ಕುರಿ, ಮೇಕೆಗಳಿಗೆ ಸಾಂಕ್ರಾಮಿಕ ರೋಗ ಬಾಧಿಸಿ ಸಾಮೂಹಿಕವಾಗಿ ಅಸು ನೀಗುತ್ತಿದ್ದವು. ಪಶು ಸಂಗೋಪನೆ ಇಲಾಖೆಯಿಂದ ಸೂಕ್ತ ಸ್ಪಂದನೆ ಇರದೇ ಎಷ್ಟೋ ಕುಟುಂಬಗಳು ಜೀವರಾಸುಗಳನ್ನು ಸಾಕಣೆ ಮಾಡುವುದನ್ನೇ ತೊರೆದಿದ್ದಾರೆ. ಅಧಿಕಾರಿಗಳ ಅಸಡ್ಡೆ ಮತ್ತು ಬೇಜವಾಬ್ದಾರಿಯಿಂದ ಜೀವನವೇ ಬೇಸರವೆನಿಸಿ ಪ್ರಾಣಿಗಳ ಸಾಕಣೆಯಿಂದ ವಿಮುಖರಾಗಿದ್ದಾರೆ. ಎಲ್ಲರಂತೆ ನಮ್ಮದೂ ಬದುಕಿದೆ. ರಾಸುಗಳಿಗೆ ರೋಗ ಬಂದರೆ ಉಚಿತ ಔಷಧಿ ನೀಡಬೇಕಾದುದು ಸರ್ಕಾರದ ಕರ್ತವ್ಯ. ಸರ್ಕಾರ ನಮ್ಮ ವೃತ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದರಿಂದ ನಾವೂ ಕೂಡ ಸಾಲಗಾರರಾಗಿದ್ದೇವೆ. ಇದರಿಂದ ಗ್ರಾಮದ ಹಲವು ಕುಟುಂಬಗಳು ದನ, ಕರು, ಕುರಿ ಮತ್ತು ಮೇಕೆ ಸಾಕಣೆಯಿಂದ ದೂರವೇ ಉಳಿಯುತ್ತಿದ್ದಾರೆ. ಅಳಿದುಳಿದ ರಾಸುಗಳನ್ನು ಮಾರಾಟ ಮಾಡಿ ಸಾಲ ತೀರಿಸಲಾಗದೇ ಸುತ್ತಲಿನ ಕೋಳಿ ಫಾರಂ, ಸಣ್ಣ ಪುಟ್ಟ ಕೈಗಾರಿಕೆಗಳಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆಂದು ಕುರಿಗಾಹಿಗಳು ನೊಂದು ನುಡಿಯುತ್ತಿದ್ದಾರೆ.
ಅಲೆಮಾರಿ ಬದುಕು:
ರಾಸುಗಳ ಸಂರಕ್ಷಕರಿಗೆ ಯಥೇಚ್ಛ ಪ್ರಮಾಣದ ಹುಲ್ಲುಗಾವಲು ಲಭಿಸುತ್ತಿಲ್ಲ. ಹೀಗಾಗಿ, ಗುಡ್ಡ ಬೆಟ್ಟಗಳತ್ತ ಮುಖ ಮಾಡುತ್ತಾರೆ. ಗುಡ್ಡದಲ್ಲಿ ಚಿರತೆ ಮತ್ತು ವನಿಗ್ಯಾ ಕಾಟ ಇರುವುರಿಂದ ದನ, ಕರುಗಳು ಚಿರತೆ ಬಾಯಿಗೆ ತುತ್ತಾಗುತ್ತಿವೆ. ಸುಗ್ಗಿಯ ಕಾಲದಲ್ಲಿ ಭತ್ತ ಕಟಾವು ಆದಮೇಲೆ ಶಹಪುರ, ಕೆರೆಹಳ್ಳಿ, ಅಗಳಕೇರಿ ಮತ್ತು ಹಿಟ್ನಾಳ ಸುತ್ತಮುತ್ತಲಿನ ಮಾಗಾಣಿಯಲ್ಲಿ ರಾಸುಗಳನ್ನು ಮೇಯಿಸಲಾಗುತ್ತದೆ. ನವೆಂಬರ್ ಬಳಿಕ ಕೊಪ್ಪಳ, ಬನ್ನಿಕೊಪ್ಪ, ತಳಕಲ್, ಬಾಣಾಪುರ ಭಾಗದಲ್ಲಿ ರಾಸುಗಳನ್ನು ಮೇಯಿಸಲಾಗುತ್ತದೆ. ಅನಾರೋಗ್ಯ ಪೀಡಿತವಾಗಿ ರಾಸುಗಳು ಸತ್ತರೆ ಕಾರಣ ತಿಳಿಯಲು ಒಬ್ಬ ಪಶು ವೈದ್ಯಾಧಿಕಾರಿಯೂ ಬರುವುದಿಲ್ಲ. ಇಲಾಖೆಗೆ ತೆರಳಿ ಮನವಿ ಮಾಡಿದರೆ ಅಸಡ್ಡೆ ತೋರುತ್ತಿದ್ದಾರೆ. ಪಶು ಸಂಗೋಪನೆ ಇಲಾಖೆ ಜಿಲ್ಲೆಯಲ್ಲಿ ಆಟಕ್ಕುಂಟು, ಲೆಕ್ಕಕ್ಕೆ ಇಲ್ಲದಂತಾಗಿದೆ ಎಂದು ದನಗಾಹಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕೈಗಾರಿಕೆಗಳ ಧೂಳಿನಿಂದ ಪರಿಸರ ನಾಶ: ಶಹಪುರ, ಬೇವಿನಹಳ್ಳಿ ಮತ್ತು ಕೆರೆಹಳ್ಳಿ ಸುತ್ತಮುತ್ತಲಿನಲ್ಲಿರುವ ಕೈಗಾರಿಕೆಗಳು ಸೂಸುವ ರಾಸಾಯನಿಕ ಮಿಶ್ರಿತ ಧೂಳು ಹುಲ್ಲಿನ ಮೇಲೆ ರಾಚುತ್ತದೆ. ಕಪ್ಪು ಬಣ್ಣದ ಧೂಳು ಮಿಶ್ರಿತ ಹುಲ್ಲು ತಿಂದು ರಾಸುಗಳು ಸಾವಿಗೀಡಾಗುತ್ತಿವೆ. ಈ ಕುರಿತು ಪರಿಸರ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದರೆ ಸ್ಪಂದನೆ ಇಲ್ಲ. ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಸ್ಥಳಕ್ಕೆ ಬಾರದೇ ಸತಾಯಿಸುತ್ತಿದ್ದಾರೆ. ಒಟ್ಟಿನಲ್ಲಿ ದನ, ಕುರಿ, ಮೇಕೆಗಳನ್ನು ಸಾಕಣೆ ಮಾಡುವುದು ಈ ಭಾಗದಲ್ಲಿ ತುಂಬಾ ಕಷ್ಟಸಾಧ್ಯವಾಗಿದೆ. ರಾಜ್ಯ ಸರ್ಕಾರ ಪರಿಸರ ಇಲಾಖೆ, ಪಶು ಸಂಗೋಪನೆ ಇಲಾಖೆಯಿಂದ ರಾಸುಗಳ ಸಂರಕ್ಷಕರಿಗೆ ಸರ್ಕಾರಿ ಸೌಲಭ್ಯ ಮತ್ತು ರಾಸುಗಳಿಗೆ ಉಚಿತ ಔಷಧಿ ವಿತರಣೆ ಮಾಡಿದರೆ ಕುರಿಗಾಹಿಗಳು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ. ಇಲ್ಲವಾದರೆ ಎಲ್ಲವನ್ನೂ ಮಾರಿ ಕೂಲಿ ಕೆಲಸಕ್ಕೆ ಹೋಗಬೇಕಾದ ದಿನಗಳು ದೂರವಿಲ್ಲವೆಂದು ಸಮಾಜದ ಸೇವಕ ವೀರಣ್ಣ ಕೋಮಲಾಪುರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.