Good boy Santosh….! Saddened to hear the news of his death

ಸಂತೋಷ್ ಸಾವಿನ ಸುದ್ದಿ ಕೇಳಿ ದುಃಖವಾಯಿತು. ಈ ಹಿಂದೆ ಬಳ್ಳಾರಿಯಲ್ಲಿ ಬೇರೆ ಚಾನಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ನಾನಾಗ ಜನಶ್ರೀ ನ್ಯೂಸ್ ಮತ್ತು ಸ್ವರಾಜ್ ಎಕ್ಸ್ಪ್ರೆಸ್ ನಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ವರದಿಗಾರನಾಗಿದ್ದೆ. ಸಂತೋಷ್ ತುಂಬಾ ಕ್ಯೂಟ್ ಮತ್ತು ಕೆಲಸದಲ್ಲಿ ಸದಾ ಜಾಗೃತಾವಸ್ಥೆಯಲ್ಲಿರುತ್ತಿದ್ದ. ನನ್ನೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿದ್ದ. ಎಲ್ಲ ವಿಷಯಗಳನ್ನೂ ಹಂಚಿಕೊಳ್ಳುತ್ತಿದ್ದ. ಆ ಚಾನಲ್ ನವರು ಆತನನ್ನ ಬೇರೆಡೆ ವರ್ಗಾಯಿಸಿದ್ದರು. ಬಳಿಕ ಮತ್ತೆ ಬಳ್ಳಾರಿಗೆ ಟಿವಿ-೯ ಕ್ಯಾಮೆರಾಮನ್ ಆಗಿ ಬಂದ. ಈ ಮಾಧ್ಯಮವೇ ಹಾಗೆ. ಶರಣೆ ಅಕ್ಕಮಹಾದೇವಿ ಹೇಳಿದಂತೆ ಬಿಟ್ಟೆನೆಂದರೂ ಬಿಡದೀ ಮಾಯೆ… ಬಿಡದಿದ್ದರೆ ಬೆಂಬತ್ತಿತ್ತು ಮಾಯೇ….! ಎನ್ನುವಂಥದ್ದು. ಈ ಹಿಂದೆ ನೋಡಿದ್ದ ಸಂತೋಷ್ ಮತ್ತೆ ಬಳ್ಳಾರಿಗೆ ಬಂದಾಗ್ಯೂ ಅದೇ ಸಂತೋಷ್ ಆಗಿಯೇ ಇದ್ದ. ಕೆಲಸದಲ್ಲಿ ಜಾಣ, ಮಾತು ಕಡಿಮೆ, ಕೆಲಸ ಜಾಸ್ತಿ. ಎಲ್ಲರೊಂದಿಗೂ ನಗು ನಗುತ್ತಲೇ ಇದ್ದ.
ಈ ಫೀಲ್ಡ್ ಗೆ ಮತ್ತೆ ಯಾಕೆ ಬಂದೆ ಸಂತೋಷ್? ಖುಷಿ ಇದೆಯಾ ಅಂತ ಕೇಳಿದ್ದೆ. ಹೊಟ್ಟೆಪಾಡು ಸರ್ ಅಂದ. ಟಿವಿ-೯ ನಂ.೧ ಚಾನಲ್ ಸರ್. ಹೇಗೂ ಅನ್ನ ಹಾಕ್ತಿದೆ. ಇರೊವಷ್ಟು ದಿನ ನಿಯತ್ತಾಗಿ ಕೆಲಸ ಮಾಡಿಕೊಂಡಿರ್ತೀನಿ ಅಂದಿದ್ದ. ಇಂಥ ನಿಯತ್ತಿನ ಸಂತೋಷ್ ಇಂದು ಇಲ್ಲ. ತಮ್ಮನಂತಿದ್ದ ಸಂತೋಷ್ ಕುಟುಂಬದಲ್ಲೀಗ ಸಂತೋಷವೇ ಇಲ್ಲ.
ಮಾಧ್ಯಮದಲ್ಲಿ ಕಷ್ಟ ಪಡುವವರು ಕಷ್ಟ ಪಡುತ್ತಲೇ ಇದ್ದಾರೆ. ದುಂಡಗಾಗುವವರು ಆಗುತ್ತಲೇ ಇದ್ದಾರೆ. ಅದಕ್ಕೇ ಅನ್ನೋದು ವಿಪರ್ಯಾಸ ಅಂತ. ಎಲ್ಲ ಕಲಿಯುಗದ ಮಹಿಮೆ
ಹೋಗಿ ಬಾ ಸಂತೋಷ್……!
ನಿನ್ನಣ್ಣ
ಎಂ.ವಿ.ಜೋಷಿ,
ಕೋಲಾರವಾಣಿ ವರದಿಗಾರ, ಬಳ್ಳಾರಿ ಜಿಲ್ಲೆ.