Gangavathi’s civic workers met with Minister Tangadgi

ಗಂಗಾವತಿ: ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿಯವರನ್ನು ಇಂದು ಕಾರಟಗಿಯಲ್ಲಿನ ಅವರ ನಿವಾಸದಲ್ಲಿ ಗಂಗಾವತಿ ನಗರಸಭೆಯ ಪೌರಕಾರ್ಮಿಕರು ಭೇಟಿಮಾಡಿ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಲಾಯಿತು ಎಂದು ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘದ ಗಂಗಾವತಿ ತಾಲೂಕಾ ಅಧ್ಯಕ್ಷರಾದ ಮಾಯಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿನ ೨೪೦೦೫ ನೇರಪಾವತಿ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ರಾಜ್ಯಸರ್ಕಾರ ಈ ಹಿಂದಿನ ಬಜೆಟ್ನಲ್ಲಿ ಘೋಷಣೆ ಮಾಡಿದಂತೆ, ಈ ಕೂಡಲೇ ಎಲ್ಲಾ ನೇರಪಾವತಿ ಪೌರಕಾರ್ಮಿಕರನ್ನು ಖಾಯಂ ಗೊಳಿಸಬೇಕು ಮತ್ತು ಮೃತಪಟ್ಟ ಪೌರಕಾರ್ಮಿಕರ ಅವಲಂಬಿತರಿಗೆ ಕೆಲಸ ನೀಡಿ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ರಾಜ್ಯಸರ್ಕಾರದ ಆದೇಶದಂತೆ ೭೦೦ ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕರಂತೆ ೨೦೧೮ ರಲ್ಲಿ ೮೦ ಜನ ಪೌರ ಕಾರ್ಮಿಕರನ್ನು ಗಂಗಾವತಿ ನಗರಸಭೆಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ೮೦ ಜನ ನೇರಪಾವತಿ ಪೌರಕಾರ್ಮಿಕರಲ್ಲಿ ಅನಾರೋಗ್ಯದಿಂದ ಮೃತಪಟ್ಟ ೦೭ ಜನ ನೇರಪಾವತಿ ಪೌರಕಾರ್ಮಿಕರ ಹಾಗೂ ನಿವೃತ್ತಿ ಹೊಂದಿದ ಪೌರಕಾರ್ಮಿಕರಿಂದ ತೆರವಾದ ಸ್ಥಾನವನ್ನು ಗಂಗಾವತಿ ನಗರಸಭೆಯವರು ಇದುವರೆಗೂ ಭರ್ತಿ ಮಾಡದೇ ಇರುವುದರಿಂದ ಕಡಿಮೆ ಸಂಖ್ಯೆಯ ಪೌರಕಾರ್ಮಿಕರಿಂದ ಅತಿಹೆಚ್ಚಿನ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಕೂಡಲೇ ಗಂಗಾವತಿ ನಗರಸಭೆಯಲ್ಲಿ ತೆರವಾದ ಪೌರಕಾರ್ಮಿಕರ ಸ್ಥಾನವನ್ನು ಮೃತಪಟ್ಟ ಪೌರಕಾರ್ಮಿಕರ ಅವಲಂಬಿತರಿಗೆ ಕೆಲಸ ನೀಡಿ ಅವಕಾಶ ಕಲ್ಪಿಸಲು ಆದೇಶ ನೀಡಿ ಪೌರಕಾರ್ಮಿಕರಿಗೆ ಇರುವ ಕೆಲಸದ ಒತ್ತಡವನ್ನು ಕಡಿಮೆ ಮಾಡಬೇಕೆಂದು ವಿನಂತಿಸಲಾಯಿತು ಹಾಗೂ ನೇರಪಾವತಿ ಪೌರಕಾರ್ಮಿಕರಿಗೆ ನಿವೇಶನ ನೀಡಲು ಕ್ರಮ ಜರುಗಿಸಬೇಕು. ಸರ್ಕಾರದ ಆದೇಶದಂತೆ ಎಲ್ಲಾ ಪೌರಕಾರ್ಮಿಕರಿಗೆ ಸಂಕಷ್ಟ ಭತ್ಯೆಯನ್ನು ನೀಡಬೇಕೆಂದು ಮನವಿ ಸಲ್ಲಿಸಲಾಯಿತು ಎಂದರು.
ಈ ಎಲ್ಲಾ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಉತ್ತರಿಸಿದ ಸಚಿವರು ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಸಂಬAಧಿಸಿದ ಸಚಿವರಿಗೆ ಹಾಗೂ ಸಂಬAಧಿಸಿದ ಅಧಿಕಾರಿಗಳಿಗೆ ಈ ಕೂಡಲೇ ಪತ್ರ ಬರೆದು ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಬಾಬರ್, ರಮೇಶ, ಪಾರ್ವತಮ್ಮ, ಡಬ್ಬ್ ಹನುಮಂತಪ್ಪ ಹಾಗೂ ಇತರರು ಇದ್ದರು.