Humanity is the lifeblood of Basava Dharma: S Diwakar’s opinion

ದೀನರ, ದು:ಖಿತರ, ನೊಂದವರ, ಪತೀತರ ಸೇವೆಯನ್ನು ಮಾಡಿದ ಬಸವಣ್ಣನವರು ಮಾನವೀಯತೆಯೇ ಧರ್ಮದ ಜೀವಾಳ ಎಂದು ಭಾವಿಸಿದ್ದರು ಎಂದು ನಿವೃತ್ತ ಕೆ ಎ ಎಸ್ ಅಧಿಕಾರಿ ಎಸ್ ದಿವಾಕರ್ ಅಭಿಪ್ರಾಯ ಪಟ್ಟರು.
ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯಲ್ಲಿ ಆಯೋಜಿಸಿದ್ದ 892ನೇ ಬಸವಜಯಂತೋತ್ಸವ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು ಈ ಜಗತ್ತಿನಲ್ಲಿ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ಆರ್ಥಿಕ ಕ್ಷೇತ್ರದಲ್ಲಿದ್ದ ಅಸಮಾನತೆ ತಾಂಡವವಾಡುತ್ತಿದ್ದಾಗ ಅದನ್ನು ಹೊಗಲಾಡಿಸಲು ಬಸವಣ್ಣನವರು ಮಾನವೀಯತೆಯ ಸೂತ್ರ ಹಿಡಿದು ಪ್ರಾಯೋಗಿಕವಾಗಿ ಸಮಾನತೆಯನ್ನು ತಂದರು. ಅವರ ಈ ಕಾರ್ಯಕ್ಕೆ ಸರ್ವ ಜಾತಿಯ ಜನರು ಕಲ್ಯಾಣದಲ್ಲಿ ಬಂದು ನೆಲೆ ನಿಂತು ಕಾಯಕ-ದಾಸೋಹ ಮಾಡುತ್ತ ಶರಣರಾದರು. ಕೇವಲ ಶರಣರಾಗಿ ಉಳಿಯದೆ; ವಚನಗಳ ಮೂಲಕ ಮಾನವೀಯ ಸಂದೇಶಗಳನ್ನು ಕೊಟ್ಟರು ಎಂದು ಮಾರ್ಮಿಕವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಿಯಂಕಾ ಎಮ್ ಪರಸಂಗ ಅವರು ಮಾತನಾಡಿ ಬಸವಣ್ಣನವರು ಅಪ್ಪಟ ಮಹಿಳಾವಾದಿಯಾಗಿದ್ದರಲ್ಲದೆ ಮಾತೃಪ್ರೇಮದಿಂದ ಸರ್ವರನ್ನೂ ಇಂಬಿಟ್ಟುಕೊಳ್ಳುವ ಶ್ರೇಷ್ಟಗುಣ ಹೊಂದಿದ್ದರು. ಪ್ರಾಶ್ಚ್ಯ ಮತ್ತು ಪಾಶ್ಚಿಮಾತ್ಯ ವಿದ್ವಾಂಸರು ಬಸವಣ್ಣನವರ ಜೀವನ ಸಾಧನೆಗೆ ಮಾರುಹೋಗಿ ಅವರನ್ನು ವಿಶ್ವದ ಮೊದಲ ಸ್ವತಂತ್ರವಾದಿ ಎಂದು ಬಣ್ಣಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಗಮೇಶ ತೊಗರಖೇಡ ಮಾತನಾಡಿ ಕರ್ನಾಟಕ ಸರಕಾರ ಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಅಭಿನಂದನಾರ್ಹ ಆದರೆ ಇಷ್ಟಕ್ಕೆ ಸರಕಾರ ನಿಲ್ಲದೆ ಸರಕಾರದ ಸಚಿವರು ಮತ್ತು ಅಧಿಕಾರಿಗಳು ಭ್ರಷ್ಟಾಚಾರದಿಂದ ಮುಕ್ತರಾಗಲು ಬಸವಣ್ಣನವರ ವಚನಗಳ ಸಂದೇಶ ಪ್ರಚಾರಕ್ಕಾಗಿ ಸರಕಾರದ ಕಛೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದರು.
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಗುರು ಬಸವಣ್ಣನವರ ತತ್ವವನ್ನು ಎತ್ತಿ ಹಿಡಿದ ಕೇಂದ್ರ ಸರಕಾರ ಪ್ರಪ್ರಥಮ ಬಾರಿಗೆ ಸಂಸತ್ ಭವನದಲ್ಲಿ ಬಸವ ಜಯಂತಿಯನ್ನು ಆಚರಿಸಿರುವುದು ಹೆಮ್ಮೆಯ ಸಂಗತಿ. ಇಂದು ಇಡೀ ವಿಶ್ವವೇ ಬಸವತತ್ವದ ಕಡೆ ಮುಖ ಮಾಡುವ ಕಾಲ ಕೂಡಿ ಬಂದಿದೆ ಎಂದರಲ್ಲದೆ ಗುರು ಬಸವಣ್ಣನವರನ್ನು ಭಾರತದಲ್ಲಿ ಕೇವಲ ಉತ್ಸವಗಳಿಗೆ ಸೀಮಿತ ಮಾಡದೆ, ಅವರ ಸಂದೇಶಗಳನ್ನು ನಿಜ ಬದುಕಿನಲ್ಲಿ ಆಚರಣೆ ತರುವಂತೆ ಕರೆ ಕೊಟ್ಟರು.
ಸಿದ್ಧಪ್ಪ ಮುಗನೂರು, ಶಶಿಕಾಂತ ಮಾಳಿ ಮಾತನಾಡಿದರು.
ಪಂಚಾಯತ್ ರಾಜ್ ಕಾಲೇಜಿನ ಪ್ರಾಂಶುಪಾಲರಾದ ಸಿದ್ಧಾರ್ಥ ಬಾವಿದೊಡ್ಡಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಶರಣೆ ದಾನಮ್ಮ ಬಳಗ ಉದ್ಘಾಟಿಸಲಾಯಿತು. ಈ ಸಂಘಟನೆಯ ನೂತನ ಅಧ್ಯಕ್ಷರಾದ ಸುಮಿತ್ರಾದೇವಿ ದಾವಣಗಾವೆ ಮತ್ತು ಪ್ರಧಾನ ಕಾರ್ಯದರ್ಶಿ ರಾಣಿ ವಡ್ಡೆ ಜೊತೆಗೆ ಪದಾಧಿಕಾರಿಗಳಾಗಿ ಆಯ್ಕೆಯಾದ 21 ಜನಕ್ಕೆ ಸತ್ಕರಿಸಲಾಯಿತು.
ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರಭು ಶೆಟ್ಟಿ, ತೀರ್ಥಪ್ಪ, ಅಡಿವೆಪ್ಪ ಪಟ್ನೆ, ಶಶಿಕಾಂತ ಕೋಡ್ಲಿ ಇವರನ್ನು ಸತ್ಕರಿಸಲಾಯಿತು.
ಔರಾದ್ ತಾಲೂಕಿನ ಸಂಗಮ ಗ್ರಾಮದ ಮಹಿಳೆಯರು ಆಡಿದ ಕೋಲಾಟ ಎಲ್ಲರ ಗಮನ ಸೆಳೆಯಿತು.
ಮಲ್ಲಿಕಾರ್ಜುನ ಸಂಗಮದ, ದಿಲೀಪ ಶಿಂದೆ, ಗಿರಿಜಾ ಸಿದ್ಧಣ್ಣ, ಶ್ರೀದೇವಿ ಉಜಳಂಬೆ, ರಾಮ ಮಜಿಗೆ, ಜಯಪ್ರಕಾಶ ಸದಾನಂದೆ, ನೀಲಕಂಠ ಸ್ವಾಮಿ ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಕೆಂಗನಾಳ ಕಲಬುರಗಿಯವದು ವಚನ ಸಂಗೀತ ನಡೆಸಿಕೊಟ್ಟರು. ಪ್ರಾಸ್ತಾವಿಕವಾಗಿ ಕುಮಾರಿ ಕೀರ್ತಿ ಓಂಕಾರ ದುಬಲಗುಂಡಿ ಮಾತನಾಡಿದರು. ಸಂಗಮೇಶ ಮಾಲಿ ಪಾಟೀಲ ಸ್ವಾಗತಿಸಿದರೆ, ಬಸವಜ್ಯೋತಿ ನಿರೂಪಿಸಿದರು ಭೀಮಶ್ರೀ ವಂದಿಸಿದರು.