Sattegala: Kannada Month Festival 2024′ programme

ಕೊಳ್ಳೇಗಾಲ, ನ.೨೨:ಕನ್ನಡದ ಯುಗಪ್ರವರ್ತಕ ಬಿಎಂ ಶ್ರೀಕಂಠಯ್ಯನವರು’ ಎಂದು ದೊಡ್ಡಿಂದುವಾಡಿ ಸರ್ಕಾರಿ ಶಾಲೆಯ ಶಿಕ್ಷಕ ಚಿಕ್ಕರಾಜು ಬಣ್ಣಿಸಿದರು.
ತಾಲೂಕಿನ ಸತ್ತೇಗಾಲದ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಜೆಎಸ್’ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೪’ ಕಾರ್ಯಕ್ರಮವನ್ನು ಕನ್ನಡತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕನ್ನಡ ನುಡಿಗೆ ಹೊಸ ಭಾಷ್ಯವನ್ನು ಬರೆದವರು ಬಿಎಂಶ್ರೀ. ಕನ್ನಡ ಮಾತನಾಡುವುದೇ ಅವಮಾನ ಎಂದು ಕರೆಯಲಾಗುತ್ತಿದ್ದ ಕಾಲದಲ್ಲಿ, ತಮ್ಮ ಭಾಷಾ ಪ್ರೌಢಿಮೆಯಿಂದ ಕನ್ನಡವನ್ನು ಬೆಳೆಸಲು ಅವರು ಶ್ರಮಿಸಿದರು. ಕನ್ನಡ ಭಾಷೆಗೆ ಮರುಜನ್ಮ ನೀಡುವ ಮೂಲಕ ಅವರು ಕನ್ನಡದ ಕಣ್ವ ಎನಿಸಿದರು. ಕಳೆದ ಶತಮಾನದಲ್ಲಿ ಸಾಮಾಜಿಕ ಬದುಕಿನಲ್ಲಿ ಮತ್ತು ಸಾಹಿತ್ಯ ಲೋಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿ ಪೋಷಿಸುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸಿದವರಲ್ಲಿ ಆಚಾರ್ಯ ಬಿಎಂ ಶ್ರೀಕಂಠಯ್ಯನವರು ಪ್ರಮುಖರಾಗಿದ್ದಾರೆ. ಕನ್ನಡ ನವೋದಯ ಕಾರ್ಯಪ್ರವರ್ತಕ, ಕನ್ನಡದ ಕಣ್ವ, ಕರ್ನಾಟಕದ ಅಚಾರ್ಯಪುರುಷ ಎಂದು ಖ್ಯಾತ ನಾಮರಾದ ಪ್ರೊ| ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯನವರು, ಇಂಗ್ಲೀಷ್ ಅಧ್ಯಾಪಕರಾಗಿದ್ದುಕೊಂಡು ಕನ್ನಡ, ಸಂಸ್ಕೃತ, ತಮಿಳು ಭಾಷೆಗಳಲ್ಲಿ ಗಾಢ ಪಾಂಡಿತ್ಯ ಪಡೆದಿದ್ದರು. ಹತ್ತೊಂಬತ್ತನೆಯ ಶತಮಾನದಿದಂದ ಕನ್ನಡ ಸಾಹಿತ್ಯ ರಚನೆಯಲ್ಲಿ ಜಡಗಟ್ಟಿ ಅರ್ಥಹೀನವಾಗಿದ್ದ, ಸಾಂಪ್ರದಾಯಿಕ ಲಕ್ಷಣಗಳಿಗೆ ಕಟ್ಟುವಿದ್ದು ಶುಷ್ಕವಾಗಿದ್ದ ಸಂದರ್ಭದಲ್ಲಿ, ಬಿಎಂಶ್ರೀಯವರು ಬರೆದ ‘ಇಂಗ್ಲೀಷ್ ಗೀತಗಳು’ ಕೃತಿ ಕನ್ನಡದ ನವೋದಯ ಕಾವ್ಯ ಯುಗಕ್ಕೆ ನಾಂದಿ ಹಾಡಿತು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಸ್’ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ ಮಾತನಾಡಿ, ಬಿಎಂಶ್ರೀಯವರು ಕನ್ನಡವನ್ನು ಎಲ್ಲಾ ಕಡೆ ಬಳಸಿ, ಬೆಳೆಸಿ, ಕನ್ನಡ ನಾಡಿನಲ್ಲೆಲ್ಲಾ ಒಂದು ರೂಪಕ್ಕೆ ತಂದು, ಅದರ ಮೂಲಕ ಕನ್ನಡಿಗರನ್ನೆಲ್ಲಾ ಒಂದು ಗೂಡಿಸುವ ಕೆಲಸವನ್ನು ಮಾಡಿದರು ಎಂದು ತಿಳಿಸಿದರು.
ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಸಿ, ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರ.ಮುಖ್ಯ ಶಿಕ್ಷಕ ಪ್ರದೀಪಕುಮಾರ ಸಹ ಶಿಕ್ಷಕರಾದ ಲೋಕಮಾತ, ಶಿವಕುಮಾರ, ಸುರೇಶ, ಸ್ವೀಕೃತ, ಇಂದ್ರಮ್ಮ, ಸಿಬ್ಬಂದಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು.