Breaking News

ನೆಟ್ಟಗಾಗದ ನೆಟ್ ಪರೀಕ್ಷೆ : ಯುಜಿಸಿ-ನೆಟ್ ಪರೀಕ್ಷೆಯಲ್ಲಿ ಅಕ್ರಮ – ಎಐಡಿವೈಓ ಖಂಡನೆ.

ಇದೇ ಜೂನ್ 18ರಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (ಎನ್‌ಟಿಎ) ನಡೆಸಿದ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಹಾಗೂ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ. ನೀಟ್, ಯುಜಿಸಿನೆಟ್ ಸೇರಿದಂತೆ ಎನ್‌ಟಿಎ ನಡೆಸುವ ಹಲವಾರು ಪರೀಕ್ಷೆಗಳಲ್ಲಿ ಹೀಗೆ ಲೋಪಗಳು ಆಗುತ್ತಿರುವುದನ್ನು ಎಐಡಿವೈಓ ತೀವ್ರವಾಗಿ ಖಂಡಿಸುತ್ತದೆ ಹಾಗೂ ಲಕ್ಷಾಂತರ ಪರೀಕ್ಷಾರ್ಥಿಗಳ ಶ್ರಮವನ್ನು ಹಾಳುಮಾಡಿದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ, ನಿದರ್ಶನೀಯ ಶಿಕ್ಷೆ ವಿಧಿಸಲು ಈ ಮೂಲಕ ಆಗ್ರಹಿಸುತ್ತದೆ.

ಜಾಹೀರಾತು

ಮಂಗಳವಾರದಂದು ಯುಜಿಸಿ-ನೆಟ್ ಪರೀಕ್ಷೆಯನ್ನು ದೇಶದಾದ್ಯಂತ 317 ನಗರಗಳಲ್ಲಿ 1205 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. 9 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ವರ್ಷದಿಂದ ಪಿಹೆಚ್‌ ಡಿ ಪ್ರವೇಶಕ್ಕೂ ನೆಟ್ ಪರೀಕ್ಷೆ ಪಾಸಾಗುವುದು ಕಡ್ಡಾಯ ಮಾಡಿದ್ದರಿಂದಾಗಿ ಪಿಹೆಚ್‌ಡಿ ಪ್ರವೇಶಕ್ಕಾಗಿ ಕಾದು ಕುಳಿತ ವಿದ್ಯಾರ್ಥಿಗಳು ಹಾಗೂ ಮಹಾವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಪಡೆಯುವುದಕ್ಕಾಗಿ ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಎಲ್ಲಾ ನೇಮಕಾತಿಗಳಲ್ಲೂ ನಡೆಯುವ ಭ್ರಷ್ಟಾಚಾರದ ಭೂತ ಈಗ ಈ ಪರೀಕ್ಷೆಗೂ ಬಡಿದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ನೇಮಕಾತಿಗಾಗಲಿ, ಉನ್ನತ ವ್ಯಾಸಂಗಕ್ಕೆ ಆಗಲಿ ಪ್ರವೇಶ ಪರೀಕ್ಷೆಗಳು ನಡೆದಾಗ ಅವುಗಳಲ್ಲಿ ಅಕ್ರಮ ಸರ್ವೇಸಾಮಾನ್ಯ ಎನ್ನುವಂತಾಗಿದೆ. ಈ ಅಕ್ರಮಗಳು ದುಡ್ಡಿದ್ದವರಿಗೆ ಉದ್ಯೋಗ, ದುಡ್ಡಿದ್ದವರಿಗೆ ಶಿಕ್ಷಣ ಎನ್ನುವ ವಾತಾವರಣವನ್ನು ಸೃಷ್ಟಿಸಿವೆ. ಜನಸಾಮಾನ್ಯರ ಬದುಕನ್ನು ಬೀದಿಗೆ ತಳ್ಳಿವೆ.

ನ್ಯಾಷನ್ ಸೈಬರ್ ಕ್ರೈಮ್ ಫ್ರೆಟ್ ಅನಾಲಿಟಿಕ್ಸ್ ಯುನಿಟ್ ಆಫ್ ಇಂಡಿಯನ್ ಸೈಬರ್ ಕ್ರೈಮ್ ಕೋ-ಆರ್ಡಿನೇಷನ್ ಸೆಂಟರ್‌ನಿಂದ ಯುಜಿಸಿಗೆ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಹೊಸದಾಗಿ ಪರೀಕ್ಷೆ ನಡೆಸುವುದಾಗಿ ಕೇಂದ್ರ ಶಿಕ್ಷಣ ಇಲಾಖೆ ತಿಳಿಸಿದೆ. ಆದರೆ ಇದುವರೆಗೂ ಅಕ್ರಮದಲ್ಲಿ ಪಾಲ್ಗೊಂಡವರೆಂದು ಯಾರನ್ನೂ ಬಂಧಿಸಲಾಗಿಲ್ಲ. ಆದ್ದರಿಂದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ವಿಧಿಸಬೇಕು. ಪರೀಕ್ಷಾ ಅಕ್ರಮದಿಂದ ಗೊಂದಲಕ್ಕೆ ಒಳಗಾಗಿರುವ ಎಲ್ಲ ಅಭ್ಯರ್ಥಿಗಳಲ್ಲಿ ಭರವಸೆ ತುಂಬಲು ಎಲ್ಲಾ ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಐಡಿವೈಓ ಈ ಮೂಲಕ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತದೆ. ಅಲ್ಲದೇ ಸರ್ಕಾರಗಳ ಮೂಗಿನಡಿಯಲ್ಲಿಯೇ ನಡೆಯುತ್ತಿರುವ ಇಂತಹ ಅಕ್ರಮಗಳ ವಿರುದ್ಧ ಒಗ್ಗಟ್ಟಾಗಿ ಪ್ರಬಲ ಹೋರಾಟಗಳನ್ನು ಕಟ್ಟಲು ಯುವಜನರು ಮುಂದಾಗಬೇಕೆಂದು ಕರೆ ನೀಡುತ್ತದೆ.

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.