![](https://kalyanasiri.in/wp-content/uploads/2024/06/IMG-20240609-WA0139-300x169.jpg)
( ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಸಾರ್ವಜನಿಕರು )
ವರದಿ: ಪಂಚಯ್ಯ ಹಿರೇಮಠ,,,
ಕೊಪ್ಪಳ : ಕುಕನೂರು ಪಟ್ಟಣದ ಮುಖ್ಯ ಭಾಗವಾದ ಹಾಗೂ ಪಟ್ಟಣದ ಹಳೆಯ ಊರು ಎನ್ನುವ ಹಣೆ ಪಟ್ಟಿ ಹೊಂದಿರುವ ಕೋಳಿಪೇಟೆಯ ಪ್ರಮುಖ ರಸ್ತೆಯಲ್ಲಿ ಚಲಿಸಬೇಕೆಂದರೇ ಸುಮಾರು 2-3 ವಾರ್ಡ್ ನ ಕಲ್ಮಶ ಹಾಗೂ ದುರ್ನಾತ ಬೀರುವ ಚರಂಡಿ ನೀರನ್ನು ದಾಟಿ ಸಾಗಬೇಕದ ದುಸ್ಥಿತಿ ಸಾರ್ವಜನಿಕರಿಗೆ ಎದುರಾಗಿದೆ.
ಹೌದು ಇದು ಇಲ್ಲಿನ ನಿವಾಸಿಗಳ ಗೋಳು ಮಾತ್ರವಲ್ಲ ಪರ ಗ್ರಾಮಗಳ ಹಾಗೂ ದೂರದ ಊರುಗಳಿಂದ ಆಗಮಿಸುವ ಜನಗಳಿಗೂ ಕೂಡಾ ಮುಜುಗರ ಉಂಟುಮಾಡುತ್ತಿದೆ. ಕಾರಣ ಈ ಗ್ರಾಮದ ಅದಿ ದೇವತೆ ಮಹಾಮಾಯ ದೇವಸ್ಥಾನಕ್ಕೂ ಕೂಡಾ ಇದೇ ಮುಖ್ಯ ರಸ್ತೆಯಾಗಿದ್ದು ಇಲ್ಲಿನ ಮೇಲಿನ ನೀರಿನಲ್ಲಿಯೇ ಭಕ್ತಾದಿಗಳು ಕಸರತ್ತು ಮಾಡಿ ದಾಟಬೇಕಾದ ಅನಿವಾರ್ಯತೆ ಎದುರಾಗಿದೆ.
ಕೇವಲ ಕಲ್ಮಶ ಹಾಗೂ ಮಲಿನ ನೀರು ಮಾತ್ರವಲ್ಲದೇ ಚರಂಡಿಗಳಲ್ಲಿ ತಂಪು ಪಾನೀಯಗಳ ಬಾಟಲಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಶೇಖರಣೆಗೊಂಡು ಚರಂಡಿ ನೀರು ಹರಿದು ಹೋಗಲು ಸುಗಮ ಮಾರ್ಗವಿಲ್ಲದಂತಾಗಿ ಚರಂಡಿಯಲ್ಲಿ ಹಂದಿ, ನಾಯಿಗಳು ಮುಸುರೆ ನೀರಿಗಾಗಿ ಓಡಾಡುವದರಿಂದ ದುರ್ವಾಸನೆ ಇಡಿ ಸುತ್ತ ಮುತ್ತಲಿನ ಪ್ರದೇಶವನ್ನು ಆವರಿಸಿಕೊಂಡು ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಸಮಸ್ಯೆ ಎದುರಾಗಿದೆ.
ಇದು ಕೇವಲ ಇದೊಂದು ವಾರ್ಡ್ ನ ಕಥೆಯಲ್ಲ ಮಹಾಮಾಯ ದೇವಸ್ಥಾನದ ಪಾದಗಟ್ಟೆಯಿಂದ ಹಿಡಿದು ಸಂಪೂರ್ಣ ಸಂತೆ ಬಜಾರ, ಹಾಗೂ ಬಸ್ ನಿಲ್ದಾಣದ ಹತ್ತಿರ, ಕೆಇಬಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಇನ್ನೂ ಕಲವೇಡೆಗಳಲ್ಲಿ ಇದೇ ರೀತಿಯಾಗಿ ಮೇಲಿನ ನೀರು ನಿಂತುಕೊಂಡು ಸೊಳ್ಳೆಗಳ ವಾಸ ಸ್ಥಾನವಾಗಿ ಮಾರ್ಪಟ್ಟು ಕಾಲರಾ, ಮಲೇರಿಯಾ ರೋಗಗಳ ಭೀತಿಯಲ್ಲಿ ಪಟ್ಟಣದ ನಿವಾಸಿಗಳು ವಾಸ ಮಾಡುವ ಅನಿವಾರ್ಯತೆ ಎದುರಾಗಿದೆ.
ಸರಕಾರ ಗ್ರಾಮಗಳ ಹಾಗೂ ಪಟ್ಟಣಗಳ ಸ್ವಚ್ಛತೆಗೆ ಆದ್ಯತೆ ನೀಡಿ ಜಿಲ್ಲಾಡಳಿತದ ಮೂಲಕ ಕೋಟ್ಯಾಂತರ ರೂಗಳು ಅನುದಾನಗಳನ್ನು ನೀಡುತ್ತಿದ್ದರು ಸಹಿತ ಸ್ವಚ್ಚತೆ ಎನ್ನುವದು ಮರೀಚಿಕೆಯಾಗಿದೆ ಎನ್ನುವದು ಪ್ರಜ್ಞಾವಂತರ ಅಂಬೋಣವಾಗಿದೆ. ಇನ್ನೂ ಮುಂದಾದರು ತಾಲೂಕ ಆಡಳಿತ ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳು ಇಂತಹ ಮಳೆಗಾಲದ ಸನ್ನಿವೇಶದಲ್ಲಿ ತ್ಯಾಜ್ಯಯುಕ್ತ ಮಲಿನ ನೀರಿನ್ನು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಂಡು ಸಾರ್ವಜನಿಕರನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುವರೇ ಕಾದು ನೋಡಬೇಕಿದೆ.
ವರದಿ : ಪಂಚಯ್ಯ ಹಿರೇಮಠ ಕೊಪ್ಪಳ,,,,