The warrior who fought with death, the revered Mother Mahadevi, who dedicated her life to the revival of Lingayat religion
ಸಾವಿನೊಡನೆ ಯುದ್ಧ ಮಾಡಿದ ಧರ್ಮಯೋಧಿನಿ
ಲಿಂಗಾಯತ ಧರ್ಮದ ಪುನರುತ್ಥಾನಕ್ಕೆ ಬದುಕನ್ನೇ ಅರ್ಪಿಸಿದ ಪೂಜ್ಯ ಮಾತೆ ಮಹಾದೇವಿಯವರು
https://youtu.be/ld3O0tazgTA?si=Hv7hRc5GmNWk4SHn
– ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ
ಒಬ್ಬ ಮಹಾತ್ಮನ ಜೀವನವನ್ನು ಅಳೆಯುವುದು ಅವನು ಬದುಕಿದ ವರ್ಷಗಳಿಂದಲ್ಲ; ಅವನು ಬದುಕಿದ ಧ್ಯೇಯದಿಂದ. ಈ ದೃಷ್ಟಿಯಿಂದ ನೋಡಿದರೆ ಪರಮ ಪೂಜ್ಯ ಮಹಾಜಗದ್ಗುರು ಮಾತೆ ಮಹಾದೇವಿಯವರ ಜೀವನವು ಕೇವಲ ಒಂದು ವ್ಯಕ್ತಿಯ ಜೀವನಕಥೆಯಲ್ಲ, ಅದು ಲಿಂಗಾಯತ ಧರ್ಮದ ಪುನರುತ್ಥಾನ ಹೋರಾಟದ ಒಂದು ಮಹತ್ವದ ಅಧ್ಯಾಯ.
1946ರ ಮಾರ್ಚ್ 13ರಂದು ಜನಿಸಿದ ಅವರು, 2019ರ ಮಾರ್ಚ್ 14ರಂದು ಲಿಂಗೈಕ್ಯರಾದರು. ಹುಟ್ಟು ಮತ್ತು ಲಿಂಗೈಕ್ಯ ದಿನಾಂಕಗಳ ಈ ಸಮೀಪತೆ ಅವರ ಜೀವನದ ಒಂದು ತಾತ್ವಿಕ ಸಂಕೇತದಂತೆ ಕಾಣುತ್ತದೆ. ತಮ್ಮ ಪ್ರವಚನಗಳಲ್ಲಿ ಅವರು ಹೇಳುತ್ತಿದ್ದ ಮಾತು — “Date of Birth ಯಾವಾಗಲೂ Date of Death ಅನ್ನು ತನ್ನ ಹಿಂದೆಯೇ ಕಟ್ಟಿಕೊಂಡು ಬರುತ್ತದೆ.” — ಅವರ ಜೀವನದಲ್ಲೇ ಸಾರ್ಥಕವಾದಂತಾಗಿದೆ.
ಮಾತಾಜಿಯವರ ಜೀವನದ ಮಹತ್ವ ಕೇವಲ ಆಧ್ಯಾತ್ಮಿಕ ಕ್ಷೇತ್ರದಲ್ಲಷ್ಟೇ ಸೀಮಿತವಾಗಿಲ್ಲ. ಅದು ಸಾಮಾಜಿಕ ಜಾಗೃತಿ, ಧಾರ್ಮಿಕ ಪುನರುತ್ಥಾನ ಮತ್ತು ಮಾನವೀಯ ಮೌಲ್ಯಗಳ ಪುನರ್ ಸ್ಥಾಪನೆಯೊಂದಿಗೂ ಆಳವಾಗಿ ಜೋಡಿಕೊಂಡಿದೆ. ತಮ್ಮ 73 ವರ್ಷಗಳ ಜೀವನದಲ್ಲಿ 54 ವರ್ಷಗಳನ್ನು ಅವರು ಧರ್ಮಸೇವೆಗೆ ಸಮರ್ಪಿಸಿದರು. ಕೇವಲ 19ನೇ ವಯಸ್ಸಿನಲ್ಲಿ ಜಂಗಮ ದೀಕ್ಷೆ ಸ್ವೀಕರಿಸಿದ ಅವರು, ನಂತರದ ಜೀವನವನ್ನೆಲ್ಲ ಗುರು ಬಸವಣ್ಣನವರ ತತ್ವದ ಪ್ರಸಾರ ಮತ್ತು ಲಿಂಗಾಯತ ಧರ್ಮದ ಸ್ವತಂತ್ರ ಗುರುತಿನ ಹೋರಾಟಕ್ಕೆ ಮೀಸಲಿಟ್ಟರು.
ಲಿಂಗಾಯತ ಧರ್ಮದಲ್ಲಿ ಸಾವು ಭಯದ ವಿಷಯವಲ್ಲ; ಅದು ಜೀವನದ ಅಂತಿಮ ಸಂಭ್ರಮ. ಆದರೆ ಮಾತಾಜಿಯವರ ಜೀವನದಲ್ಲಿ ಒಂದು ವಿಶಿಷ್ಟ ವಿರೋಧಾಭಾಸ ಕಾಣುತ್ತದೆ. ಒಂದು ಕಡೆ ಅವರು ಸಾವನ್ನು ಸ್ವಾಗತಿಸಲು ಸಮಾಧಿಯನ್ನೇ ಮುಂಚಿತವಾಗಿ ಸಿದ್ಧಮಾಡಿಕೊಂಡಿದ್ದರು; ಇನ್ನೊಂದು ಕಡೆ ಧರ್ಮಕಾರ್ಯ ಅಪೂರ್ಣವಾಗಿರುವುದರಿಂದ ಇನ್ನೂ ಬದುಕಬೇಕು ಎಂಬ ಸಂಕಲ್ಪದಿಂದ ಅವರು ಸಾವಿನೊಡನೆ ಯುದ್ಧ ಮಾಡಿದರು. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ದೊರಕಿಸಬೇಕೆಂಬ ಮಹತ್ತರ ಗುರಿ ಅವರ ಮುಂದಿತ್ತು. ಅದಕ್ಕಾಗಿಯೇ ತಮ್ಮ ಜೀವನದ ಕೊನೆಯ ವರ್ಷಗಳಲ್ಲಿ ಅವರು ದೇಹದ ಅಶಕ್ತಿಯ ನಡುವೆಯೂ ಅಸಾಧಾರಣ ಮನೋಬಲದಿಂದ ಬದುಕಿದರು.
ಮಾತಾಜಿಯವರ ತಪಸ್ಸಿನ ಆಳವನ್ನು ಅವರ ಜೀವನದ ಕೆಲವು ಘಟನೆಗಳು ಸ್ಪಷ್ಟಪಡಿಸುತ್ತವೆ. 1972ರಲ್ಲಿ ಬೆಂಗಳೂರಿನಲ್ಲಿ ಬಸವ ಮಂಟಪ ನಿರ್ಮಾಣವಾಗುವ ಸಂದರ್ಭದಲ್ಲಿ ಅವರು ಸ್ವತಃ ಕಟ್ಟಡ ಕಾಮಗಾರಿಯಲ್ಲಿ ಪಾಲ್ಗೊಂಡಿದ್ದರು. ತಲೆಯ ಮೇಲೆ ಸಿಮೆಂಟಿನ ಬುಟ್ಟಿಯನ್ನು ಹೊತ್ತು ದುಡಿಯುತ್ತಿದ್ದ ಅವರ ಚಿತ್ರಗಳು ಇಂದು ಕೇವಲ ನೆನಪುಗಳಲ್ಲ; ಅವು ಒಂದು ತತ್ವದ ಜೀವಂತ ರೂಪಕ.
ಈ ಸಂದರ್ಭದಲ್ಲಿ ಸರ್ವಜ್ಞನ ವಚನ ಅನಾಯಾಸವಾಗಿ ನೆನಪಾಗುತ್ತದೆ:
ಆಳಾಗ ಬಲ್ಲವನು ಆಳುವನು ಅರಸಾಗಿ
ಆಳಾಗಿ ಬಾಳಲರಿಯದವನು | ಕಡೆಯಲ್ಲಿ
ಹಾಳಾಗಿ ಹೋಹ ಸರ್ವಜ್ಞ||
ಇಂದು ಬೆಂಗಳೂರಿನ ಬಸವ ಮಂಟಪ ಕಟ್ಟಡವು ಕೇವಲ ಒಂದು ಧಾರ್ಮಿಕ ಕೇಂದ್ರವಲ್ಲ; ಅದು ತ್ಯಾಗ, ಪರಿಶ್ರಮ ಮತ್ತು ಆಧ್ಯಾತ್ಮಿಕ ದೃಢಸಂಕಲ್ಪಗಳ ಸಂಕೇತವಾಗಿದೆ.
ಮಾತಾಜಿಯವರು ಆಗರ್ಭ ಶ್ರೀಮಂತ ಮನೆತನದಲ್ಲಿ ಜನಿಸಿದರು. ಅವರ ತಂದೆ ಶರಣ ಡಾ. ಬಸಪ್ಪನವರು ಆ ನಿವೇಶನದಲ್ಲಿ ನರ್ಸಿಂಗ್ ಹೋಮ್ ನಿರ್ಮಿಸಿ ತಮ್ಮ ಮಗಳನ್ನು ವೈದ್ಯೆಯನ್ನಾಗಿ ಮಾಡುವ ಕನಸು ಕಂಡಿದ್ದರು. ಆದರೆ ಇತಿಹಾಸವು ಬೇರೆ ದಿಕ್ಕಿನಲ್ಲಿ ಸಾಗಿತು. ಆ ಸ್ಥಳದಲ್ಲಿ ಆಸ್ಪತ್ರೆಯ ಬದಲು ಬಸವ ಮಂಟಪ ನಿರ್ಮಾಣವಾಯಿತು. ಅವರು ವೈದ್ಯೆಯಾಗಲಿಲ್ಲ; ಆದರೆ ಭವರೋಗ ವೈದ್ಯೆಯಾದರು. ನಿರಾಶೆ, ನಿಸ್ಸಹಾಯಕತೆ ಮತ್ತು ಜೀವನದ ಸಂಕಟಗಳಲ್ಲಿ ಸಿಲುಕಿದ್ದ ಅನೇಕ ಜನರಿಗೆ ಅವರ ಪ್ರವಚನಗಳು ಹೊಸ ಆಶಾಕಿರಣವಾಗಿ ಪರಿಣಮಿಸಿದವು.
ಒಂದು ಪ್ರವಚನ ಕೇಳಿ ಆತ್ಮಹತ್ಯೆಯ ನಿರ್ಧಾರದಿಂದ ಹಿಂದಿರುಗಿದ ಜನರ ಕಥೆಗಳು ಅನೇಕ. ಅವರ ಮಾತುಗಳು ಕೇವಲ ಧಾರ್ಮಿಕ ಉಪದೇಶಗಳಲ್ಲ; ಅವು ಬದುಕನ್ನು ಮರು ರೂಪಿಸುವ ಆಧ್ಯಾತ್ಮಿಕ ಶಕ್ತಿ ಹೊಂದಿದ್ದವು.
ಮಾತಾಜಿಯವರು ಕೇವಲ ಧರ್ಮಗುರುಗಳಲ್ಲ. ಅವರು ವಿದ್ವಾಂಸಳು, ಕ್ರಾಂತಿಕಾರಿ ಲೇಖಕಿ, ಅಪೂರ್ವ ವಾಗ್ಮಿ ಮತ್ತು ಆಳವಾದ ಅಧ್ಯಯನಶೀಲ ಚಿಂತಕಿ. ಅವರ ಗ್ರಂಥಗಳು ಮತ್ತು ಪ್ರವಚನಗಳು ಲಿಂಗಾಯತ ಧರ್ಮದ ತಾತ್ವಿಕ ಪರಂಪರೆಗೆ ಹೊಸ ಜೀವ ತುಂಬಿವೆ.
https://youtu.be/ld3O0tazgTA?si=Hv7hRc5GmNWk4SHn
ಮಹಾತ್ಮ ಬುದ್ಧನು ಜೀವನದ ನಶ್ವರತೆಯನ್ನು ಅರಿತು ಸತ್ಯದ ಹುಡುಕಾಟಕ್ಕೆ ಹೊರಟಂತೆ, ಮಾತಾಜಿಯವರು ಕೂಡ ಒಂದು ಪ್ರವಚನದಿಂದಲೇ ಜೀವನದ ದಿಕ್ಕು ಬದಲಿಸಿಕೊಂಡರು. ಶ್ರೀಮಂತ ಜೀವನವನ್ನು ತೊರೆದು ಸರಳತೆಯನ್ನು ಆರಿಸಿಕೊಂಡು ಬಸವ ತತ್ವಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿದರು.
ಅವರು ನೊಂದವರ ನಂದಾದೀಪ, ಶೋಷಿತರ ಸಂಜೀವಿನಿ, ಸ್ತ್ರೀಕುಲದ ಪ್ರೇರಣಾಸ್ವರೂಪಿ, ಧರ್ಮಕ್ರಾಂತಿಯ ದಿವ್ಯಜ್ಯೋತಿ. ಲಿಂಗಾಯತ ಧರ್ಮದ ಪುನರುತ್ಥಾನದಲ್ಲಿ ಅವರ ಪಾತ್ರ ಅಪೂರ್ವ.
ಇಂದು ಅವರ ಜಯಂತಿಯನ್ನು ಸ್ಮರಿಸುವ ಸಂದರ್ಭದಲ್ಲಿ ಒಂದು ಪ್ರಶ್ನೆ ನಮ್ಮ ಮುಂದಿರುತ್ತದೆ: ಧರ್ಮಕ್ಕಾಗಿ, ಸಮಾಜಕ್ಕಾಗಿ ಮತ್ತು ಮಾನವೀಯ ಮೌಲ್ಯಗಳಿಗಾಗಿ ನಾವು ಎಷ್ಟು ತ್ಯಾಗ ಮಾಡಲು ಸಿದ್ಧರಾಗಿದ್ದೇವೆ?
ಮಾತಾಜಿಯವರ ಜೀವನವು ನಮಗೆ ನೀಡುವ ಸಂದೇಶ ಸ್ಪಷ್ಟ —
ಧರ್ಮಕ್ಕಾಗಿ ಬದುಕಿದ ಜೀವನವೇ ನಿಜವಾದ ಅಮರತ್ವ.
— ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿs
Legal action if domestic gas is used for commercial purposes ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ…
Municipal Council budget pre-meeting on March 16thPublic invited to participate by civic commissioner ಮಾ.16ರಂದು ನಗರಸಭೆ…
Let's have a plastic-free lifestyle: Nagaraj S. Guttedar ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್…
Women need legal knowledge: Lawyer Nandini's advice on Women's Day ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ…
Government warns Samar International Islamic School for starting school enrollment in violation of court order…
Karnataka Provincial Farmers' Association demands justice for Kudathini land victims. ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು…