ಕೊಪ್ಪಳ, ಜೂ. 29 : ಭಾರತ ಸರಕಾರವು 2025ರ ಒಳಗೆ ಕ್ಷಯ ಮುಕ್ತ ಭಾರತವನ್ನಾಗಿಸಲು ಉದ್ದೇಶಿಸಿದ್ದು, ಅದರಂತೆ ಪ್ರಾಯೋಗಿಕವಾಗಿ ಕೃತಕ ಬುದ್ದಿವಂತಿಕೆಯ ಆಧಾರದ ಮೇಲೆ ಕ್ಷಯರೋಗ ಪತ್ತೆ ಮಾಡುವ ಪ್ರಾಯೋಗಿಕ ಯೋಜನೆಗೆ ಕರ್ನಾಟಕ ರಾಜ್ಯದ 04 ಜಿಲ್ಲೆಗಳನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಕೊಪ್ಪಳ ಜಿಲ್ಲೆಯೂ ಸ್ಥಾನ ಪಡೆದಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮಹೇಶ ಎಂ.ಜಿ ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯನ್ನು ಆಯ್ಕೆ ಮಾಡಿರುವುದರಿಂದಾಗಿ ಮುಂದಿನ ದಿನಗಳಲ್ಲಿ ಕ್ಷಯರೋಗ ಪತ್ತೆಯ ಪ್ರಮಾಣ ಹೆಚ್ಚಿಸುವುದು ಮತ್ತು ಪತ್ತೆಯಾದ ಕ್ಷಯರೋಗಿಗಳಿಗೆ ಶೀಘ್ರವಾಗಿ ಚಿಕಿತ್ಸೆಯನ್ನು ಪ್ರಾರಂಭಿಸುವ ಮೂಲಕ ಇತರರಿಗೆ ಸೋಂಕು ಹರಡದಂತೆ ತಡೆಗಟ್ಟಬಹುದಾಗಿದೆ. ಮೊದಲ ಹಂತದಲ್ಲಿ ತಾಲ್ಲೂಕು ಆಸ್ಪತ್ರೆ ಮತ್ತು ಜಿಲ್ಲಾ ಕೇಂದ್ರದಲ್ಲಿ ಕೃತಕ ಬುದ್ದಿವಂತಿಕೆ ಆಧಾರದ ಮೇಲೆ ಕ್ಷ-ಕಿರಣದಲ್ಲಿ ಸಂಶಯಾಸ್ಪದ ಕ್ಷಯರೋಗಿಯನ್ನು ಪತ್ತೆ ಹಚ್ಚಲಾಗುವುದು. ಸಂಶಯಾಸ್ಪದ ಕ್ಷಯರೋಗಿಗಳು ಕಂಡುಬAದಲ್ಲಿ ನಾಟ್ ವಿಧಾನದ ಮುಖಾಂತರ ಕಫ ಪರೀಕ್ಷೆ ಮಾಡಿ ಕ್ಷಯವನ್ನು ಧೃಢೀಕರಿಸಬಹುದಾಗಿದೆ.
ಪ್ರಸಕ್ತ ಕೋವಿಡ್ ಪರಿಸ್ಥಿತಿಯಲ್ಲಿ ಕ್ಷಯ ಪತ್ತೆ ಪ್ರಮಾಣ ಕಡಿಮೆಯಾಗಿರುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಕ್ಷಯರೋಗದ ಲಕ್ಷಣಗಳನ್ನು ಹೊಂದಿದವರು ಕಫ ಪರೀಕ್ಷೆಗೆ ಒಳಪಡದೇ ಇರುವುದು, ಹಿಂಜರಿಕೆ ತೋರಿಸುತ್ತಿರುವುದು ಕಂಡುಬAದಿದೆ. ಆದ್ದರಿಂದ 2021ನೇ ಸಾಲಿನಿಂದ ಇಲ್ಲಿಯವರೆಗೆ 1,515 ಕ್ಷಯರೋಗಿಗಳನ್ನು ಪತ್ತೆ ಮಾಡಲು ಗುರಿ ಹೊಂದಲಾಗಿತ್ತು. ಇದರಲ್ಲಿ 1,282 ಕ್ಷಯರೋಗಿಗಳನ್ನು ಪತ್ತೆ ಮಾಡಲಾಗಿದೆ. ಸುಮಾರು 233 ಕ್ಷಯರೋಗಿಗಳು ಚಿಕಿತ್ಸೆಯಿಂದ ವಂಚಿತವಾಗಿದ್ದು, ಈ ರೋಗಿಗಳನ್ನು ಪತ್ತೆ ಹಚ್ಚಲು ಈ ಕೃತಕ ಬುದ್ದಿವಂತಿಕೆ ಸಹಕಾರಿಯಾಗಲಿದೆ.
ಕಳೆದ 2 ವರ್ಷದಲ್ಲಿ ಕ್ಷಯರೋಗ ನಿರ್ಮೂಲನೆಯಲ್ಲಿ ಕೊಪ್ಪಳ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದ್ದು, ಪ್ರಸಕ್ತ ಸಾಲಿನಲ್ಲಿ ಹಿನ್ನಡೆಯಾಗಿರುವುದರಿಂದ ಯಾವುದೇ ಕ್ಷಯರೋಗದ ಲಕ್ಷಣಗಳಾದ ಸಂಜೆ ವೇಳೆ ಜ್ವರ, ಎರಡು ವಾರಕ್ಕೂ ಹೆಚ್ಚು ಕೆಮ್ಮು, ತೂಕ ಕಡಿಮೆಯಾಗುವುದು, ಕಫದಲ್ಲಿ ರಕ್ತ ಬೀಳುವುದು, ಕತ್ತು ಮತ್ತು ಕಂಕುಳಲ್ಲಿ ಗಡ್ಡೆಗಳು ಕಂಡುಬAದಲ್ಲಿ ತಕ್ಷಣವೇ ಸಮೀಪದ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಕಫ ಪರೀಕ್ಷೆ ಮತ್ತು ಕ್ಷ-ಕಿರಣ ಪರೀಕ್ಷೆಗೆ ಒಳಪಟ್ಟು ಕ್ಷಯರೋಗವಿಲ್ಲವೆಂದು ಖಾತ್ರಿ ಪಡಿಸಿಕೊಳ್ಳಲು ತಿಳಿಸಲಾಗಿದೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಜಿಲ್ಲಾ ಆಸ್ಪತ್ರೆ, ಕೊಪ್ಪಳ ಮತ್ತು ಉಪವಿಭಾಗ ಆಸ್ಪತ್ರೆ, ಗಂಗಾವತಿಯಲ್ಲಿ 02 ಸಿಬಿನಾಟ್ ಕಫ ಪರೀಕ್ಷಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಈಗ ತಾಲ್ಲೂಕು ಆಸ್ಪತ್ರೆ, ಕುಷ್ಟಗಿಯಲ್ಲಿ ಹೊಸದಾಗಿ ಸಿಬಿನಾಟ್ ಪರೀಕ್ಷಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಇದರಿಂದಾಗಿ ಎಲ್ಲಾ ಸಂಶಯಾಸ್ಪದ ಕ್ಷಯರೋಗಿಗಳನ್ನು ಪರೀಕ್ಷೆಗೆ ಒಳಪಡಿಸಲು ಅನುಕೂಲವಾಗಲಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.