ಮಾನ್ಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರಿಂದ ವಿವಿಧ ಕಾಮಗಾರಿ ಉದ್ಘಾಟನೆ

ನರೇಗಾದಡಿ ನಿರ್ಮಾಣವಾದ ಹೈಟೆಕ್ ಶೌಚಾಲಯ, ಬಿಸಿಯೂಟದ ಕೊಠಡಿ ಕಾಮಗಾರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕರಾಂಪೂರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನರೇಗಾದಡಿ ನಿರ್ಮಾಣವಾದ ಬಿಸಿಯೂಟದ ಕೊಠಡಿ, ಶೌಚಾಲಯ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನದಡಿ ನಿರ್ಮಾಣವಾದ ಶಾಲಾ ಕೊಠಡಿ ಕಾಮಗಾರಿಯನ್ನು ಗಂಗಾವತಿ ಶಾಸಕರಾದ ಪರಣ್ಣ ಮುನವಳ್ಳಿ ಅವರು ಉದ್ಘಾಟಿಸಿದರು.
ಈ ವೇಳೆ ಶಾಸಕರು ನರೇಗಾದಡಿ ನಿರ್ಮಾಣವಾದ ಹೈಟೆಕ್ ಶೌಚಾಲಯ, ಬಿಸಿಯೂಟದ ಕೊಠಡಿ ಕಾಮಗಾರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ನಂತರ ಮಾತನಾಡಿ, ಸ್ಥಳೀಯರು ಸಹಕರಿಸಿದರೆ ಶಾಲೆಗಳು ಅಭಿವೃದ್ಧಿ ಹೊಂದಲು ಸಾಧ್ಯ. ಗ್ರಾಮೀಣ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ಸರಕಾರಕ್ಕೆ ಇದೆ. ಆ ನಿಟ್ಟಿನಲ್ಲಿ ನರೇಗಾ ಯೋಜನೆಯಡಿ ತಾಲೂಕಿನಾದ್ಯಂತ ಸಾಕಷ್ಟು ಉತ್ತಮ ಮಾದರಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ನಂತರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್ ಅವರು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನರೇಗಾದಡಿ ಸುಭದ್ರ ಶಾಲಾ ಅಭಿವೃದ್ಧಿಯ ಕಾಮಗಾರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಯೋಜನೆಯಲ್ಲಿ ಜನರಿಗೆ ಉದ್ಯೋಗ ದೊರೆಯುವದರೊಂದಿಗೆ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಆಗುತ್ತಿವೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ತಿಮ್ಮಪ್ಪ ಬಾಳೆಕಾಯಿ,ಉಪಾಧ್ಯಕ್ಷರಾದ ಸುಶೀಲಾ ಬಾಯಿ, ಸದಸ್ಯರಾದ ಗಾಳೇಮ್ಮ, ರಾಜಶೇಖರ, ವೆಂಕಟೇಶ್ ಬಾಬು, ನರಸಿಂಹ ಹಾಗೂ ಗ್ರಾಮದ ಪ್ರಮುಖರಾದ ಲಲಿತಾರಾಣಿ ಶ್ರೀರಂಗದೇವರಾಯಲು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಕೆ. ಐಇಸಿ ಸಂಯೋಜಕ ಸೋಮನಾಥ ನಾಯಕ, ಸೇರಿ ಗ್ರಾ.ಪಂ ಸಿಬ್ಬಂದಿಗಳು ಇತರರಿದ್ದರು.