Historical study of Hulikere in Koppal
“ಕೆರೆಯಂಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು, ಮಿತ್ರರ್ಗಿಂಬುಕೆಯ್ ನಂಬಿದರ್ಗೆರೆವಟ್ಟಾಗಿರು, ಶಿಷ್ಟರಂ ಪೊರೆ ಎನುತ್ತಿಂತೆಲ್ಲಮಂ ಪಿಂತೆ ತಾನೆರೆದಳ್ ಪಾಲೆರೆವೆಂದುತೊಟ್ಟು ಕಿವಿಯೊಳ್
ಲಕ್ಷ್ಮೀಧರಾಮಾತ್ಯನಾ” ಎಂದು ಕ್ರಿ.ಶ 1411ರ ವಿಜಯನಗರದ ಪ್ರೌಢದೇವರಾಯನ ಮಂತ್ರಿ ಲಕ್ಷ್ಮೀಧರಮಾತ್ಯನ ಶಾಸನದಲ್ಲಿ ಬರೆಯಲಾಗಿದೆ. ಅಂದರೆ “ಕೆರೆಯನ್ನುಕಟ್ಟಿಸು, ಬಾವಿಯನ್ನು ತೋಡಿಸು, ದೇವಾಲಯಗಳನ್ನು ನಿರ್ಮಿಸು, ಬಂಧನದಲ್ಲಿದ್ದ ಅನಾಥರನ್ನು ಬಿಡಿಸು, ಸ್ನೇಹಿತರಿಗೆ ಸಹಾಯಮಾಡು, ನಂಬಿದವರಿಗೆ ಆಶ್ರಯದಾತನಾಗು, ಸತ್ಪುಷರನ್ನು ರಕ್ಷಿಸು” ಎಂದು ತನ್ನ ತಾಯಿ ಹಾಲುಣಿಸುತ್ತಾ ಮಗನಿಗೆ ಕಿವಿಯಲ್ಲಿ ಹೇಳಿದ್ದನ್ನು ಪ್ರಸ್ತುತ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಅಮೃತದಂತಹ ಎದೆಯಾಲಿನ ಜೊತೆಗೆ ಮುತ್ತಿನಂತಹ ಮಾತುಗಳಿಂದ ತಾಯಿ ತನ್ನ ಮಗುವಿಗೆ ಉಣಿಸುತ್ತಾ ನೀತಿಬೋಧನೆ ಮಾಡಿದ್ದು ಚರಿತ್ರೆಯಲ್ಲಿ ದಾಖಲಾಗಿದೆ. ಬಹುಶಃ ಇಂತಹ ಮಾತುಗಳ ಪ್ರೇರಣೆಯಿಂದಲೇ ಪ್ರಾಚೀನ ಕಾಲದಲ್ಲಿ ಕೆರೆ-ಕಟ್ಟೆ, ಬಾವಿ, ಅರವಟ್ಟಿಗೆಗಳ ನಿರ್ಮಾಣ ಹೆಚ್ಚಿನ ರೀತಿಯಲ್ಲಿ ಆಗಿರಬೇಕು ಮತ್ತು ಇದನ್ನು ಒಂದು ಸಂಸ್ಕೃತಿ ಎಂತಲೂ ಭಾವಿಸಿದ್ದರು.
ಪ್ರಾಚೀನ ಕಾಲದಲ್ಲಿ ಜಲ ಸಂರಕ್ಷಣೆಗಾಗಿ ಬಹಳ ವಿಶೇಷವಾದ ಆಸಕ್ತಿಯನ್ನು ವಹಿಸುತ್ತಿದ್ದರು. ಅಂದಿನ ಕಾಲದಲ್ಲಿ ತಂತ್ರಜ್ಞಾನವಿಲ್ಲದ ಯುಗದಲ್ಲಿ ನೀರಿನ ಸಂಗ್ರಹಣೆ ಅಷ್ಟು ಸುಲಭವಾಗಿರಲಿಲ್ಲ. ಹಾಗೆಂದು ಅವರು ಕೈಕಟ್ಟಿ ಕುಳಿತಿರುತ್ತಿರಲಿಲ್ಲ. ಪ್ರಜೆಗಳಿಗೆ ಹೇಗಾದರೂ ಮಾಡಿ ನೀರನ್ನು ಒದಗಿಸಬೇಕೆಂದು ಅರಸರು, ಮಂತ್ರಿಗಳು, ಸಾಮಂತ-ಮಾಂಡಳಿಕರು ಹರಸಹಾಸ ಮಾಡುತ್ತಿದ್ದರು. ಕೆಲವು ಕೆರೆ-ಕಟ್ಟೆ-ಬಾವಿಗಳ ನಿರ್ಮಾಣ ಸಹಜವಾಗಿದ್ದರೆ, ಇನ್ನು ಕೆಲವುಗಳ ನಿರ್ಮಾಣವನ್ನು ಗಮನಿಸಿದರೆ ಇಂದಿನ ತಂತ್ರಜ್ಞಾನ ಯುಗಕ್ಕೂ ಸವಾಲೆನಿಸಬಹುದೇನೂ. ಅದೇನೇ ಸವಾಲಾಗಿದ್ದರೂ ಅಥವಾ ಸರಳವಾಗಿದ್ದರೂ ಕೆರೆ-ಬಾವಿಗಳ ನಿರ್ಮಾಣವಂತೂ ಅವಿರತವಾಗಿ ನಡೆದಿದೆ.
ದೇಶದ ತುಂಬಾ ಅನೇಕ ಕೆರೆ-ಕಟ್ಟೆ, ಬಾವಿ, ಅರವಟ್ಟಿಗೆಗಳು ನಿರ್ಮಾಣವಾಗಿವೆ. ಕೆಲವು ಕೆರೆ-ಬಾವಿಗಳು ಸಹಜವಾಗಿ ಪ್ರಕೃತಿಯಲ್ಲಿ ನಿರ್ಮಾಣವಾಗಿದ್ದರೆ, ಇನ್ನು ಕೆಲ ಕೆರೆ-ಕಟ್ಟೆಗಳನ್ನು ಮಾನವರು ತಮ್ಮ ಅನುಕೂಲಕ್ಕಾಗಿ ನಿರ್ಮಿಸಿದ್ದಾರೆ. ಅದರಲ್ಲಿ ಕೆಲವು ನಿರ್ಮಾಣದ ಬಗ್ಗೆ ಮಾಹಿತಿ ತಿಳಿದುಬಂದರೆ, ಇನ್ನು ಕೆಲ ನಿರ್ಮಾಣದ ಬಗ್ಗೆ ತಿಳಿದುಬರುವುದಿಲ್ಲ. ಅವು ದಾಖಲಾಗಿರಬಹುದು ಅಥವಾ ದಾಖಲಾಗಿ ಚರಿತ್ರೆಯಲ್ಲಿ ನಾಶವಾಗಿಯೂ ಇರಬಹುದು. ಹೀಗಾಗಿ ಎಷ್ಟೋ ನಿರ್ಮಾಣಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುತ್ತಿಲ್ಲ ಮತ್ತು ಅವುಗಳ ಅಧ್ಯಯನವೂ ಕೂಡ ಸರಿಯಾದ ರೀತಿಯಲ್ಲಿ ಆಗಿರುವುದಿಲ್ಲ. ಅದರಂತೆ ಕೊಪ್ಪಳ ನಗರದ ಇಂದಿನ ದಕ್ಷಿಣ ಭಾಗದಲ್ಲಿರುವ ‘ಹುಲಿಕೆರೆ’ಯ ಬಗ್ಗೆ ಹೆಚ್ಚಿನ ಅಧ್ಯಯನ ನಡೆದಿರುವುದಿಲ್ಲ. ಹಿಂದೆ ನೀರಿನ ಸಂಗ್ರಹಣೆ ಮತ್ತು ಸರಬರಾಜು ವ್ಯವಸ್ಥೆ ಸವಾಲಾಗಿದ್ದ ಕಾಲದಲ್ಲಿ ಕೊಪ್ಪಳದ ಜನರಿಗೆ ನೀರುಣಿಸಿದ ಹುಲಿಕೆರೆ ಇಂದಿಗೂ ಸಹ ಜನರನ್ನು ಕೈಬೀಸಿ ಕರೆಯುತ್ತಿದೆ.
ಅರಸರು, ಮಂತ್ರಿ-ಮಾಂಡಳಿಕರು ಅಷ್ಟೇ ಅಲ್ಲ ಜನಸಾಮಾನ್ಯರೂ ಕೂಡ ಕೆರೆ-ಕಟ್ಟೆಗಳನ್ನು ಕಟ್ಟಿದ್ದಾರೆ. ಅವುಗಳಿಗೆ ತಮ್ಮ ಹೆಸರೂ ಸಹ ಇಟ್ಟ ಅನೇಕ ಉದಾಹರಣೆಗಳು ಚರಿತ್ರೆಯಲ್ಲಿ ದೊರೆಯುತ್ತಿವೆ. ಅಲ್ಲದೇ ವ್ಯಕ್ತಿಗಳ ಹೆಸರು, ಪ್ರಾಣಿ-ಪಶು-ಪಕ್ಷಿಗಳ ಹೆಸರುಗಳಿಂದ ಕೆರೆಗಳನ್ನು ನಿರ್ಮಿಸುತ್ತಿದ್ದರು ಮತ್ತು ಕರೆಯುತ್ತಿದ್ದರು. ಅಂತಹ ಹೆಸರುಗಳಿಂದ ಕರೆಯುತ್ತಿರುವ ಕೆರೆಗಳು ಇಂದಿಗೂ ಕೊಪ್ಪಳ ಪರಿಸರದಲ್ಲಿ ಕಾಣಸಿಗುತ್ತಿವೆ. ಚಿನ್ನಾದೇವಿಕೆರೆ, ಲಕ್ಷೀದೇವಿಕೆರೆ(ಕನಕಗಿರಿ), ರಾಮಲಿಂಗಕೆರೆ(ಗಂಗಾವತಿ), ಗಿಣಿಗೇರಿಕೆರೆ(ಗಿಣಿಗೇರಾ), ಸೂಳೆಕೆರೆ(ಸೂಳೆಕೇರಿ), ನಿಡಶೇಸಿಕೆರೆ(ನಿಡಶೇಸಿ), ಪುರದಕೆರೆ(ಪುರ), ರಾಯರಕೆರೆ(ತಾವರಗೆರಾ, ವೆಂಕಟಗಿರಿ, ಚಿಕ್ಕಬೆಣಕಲ್) ಮಲಕಸಮುದ್ರಕೆರೆ(ಮಲಕಸಮುದ್ರ) ಇತ್ಯಾದಿ ಕೆರೆಗಳನ್ನು ಕೊಪ್ಪಳ ಜಿಲ್ಲೆಯಲ್ಲಿ ಇಂದಿಗೂ ಸಹ ಕಾಣಬಹುದಾಗಿದೆ. ಅವುಗಳ ಜೊತೆಗೆ ಕೊಪ್ಪಳದ ‘ಹುಲಿಕೆರೆ’ ಒಂದು ಬಹುದೊಡ್ಡ ಕೆರೆಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಹುಲಿಕೆರೆ ಅಕ್ಕ-ಪಕ್ಕದಲ್ಲೇ ಹಂದಿ ಕೆರೆ, ಶಿರಸಪ್ಪಯ್ಯ ಎಂಬ ಸಣ್ಣ ಕೆರೆಗಳಿವೆ. ಆದರೆ ಅವು ಹುಲಿಕೆರೆಯಷ್ಟು ದೊಡ್ಡಪ್ರಮಾಣದಲ್ಲಿ ಇರುವುದಿಲ್ಲ.
ಈ ಹುಲಿಕೆರೆ ನಿರ್ಮಾಣದ ಬಗ್ಗೆ ಶಾಸನ ಆಕರಗಳಿಂದ ತಿಳಿದುಬರುವುದಿಲ್ಲವಾದರೂ ವೀರನಗೌಡ ಡಿ.ಎಸ್.ಪಾಟೀಲ ಮೆಣಸಗಿಯವರ ‘ಸಾಲಾರಜಂಗ ಬಹದ್ದೂರ ಇವರ ಜೀವನಚರಿತ್ರೆ’ ಎಂಬ ಕೃತಿಯಲ್ಲಿ ಅದರ ನಿರ್ಮಾಣದ ಬಗ್ಗೆ ಉಲ್ಲೇಖವಿದೆ. ‘ಸಾಲರಜಂಗ ಬಹದ್ದೂರ’ ಎಂಬ ಬಿರುದಾಂಕಿತ ಮೀರತುರಾಬ ಅಲೀಖಾನ ಬಹದ್ದೂರರವರು(1829-1883) ಕೊಪ್ಪಳದ ಜಾಗೀರದಾರನಾಗಿದ್ದನು. ಇವರನ್ನು ಒಂದನೇ ಸಾಲರಜಂಗ ಬಹದ್ದೂರು ಎಂತಲೂ ಕರೆಯಲಾಗುತ್ತಿತ್ತು. ಇವನ ತರುವಾಯ ಇವನ ಹಿರಿಯ ಮಗ ನವಾಬ ಮೀರಲಾಯಕ ಅಲೀಖಾನ (1882ರಲ್ಲಿ ಜನನ)ನ ಕಾಲದಲ್ಲಿ ನರಸಿಂಗರಾಯರು ತಾಲೂಕುದಾರರಾಗಿದ್ದರು. ಇವರ ಅವಧಿಯಲ್ಲೇ ಕೊಪ್ಪಳದ ನಕಾಶೆ ಸಿದ್ಧಪಡಿಸಿ ಕೊಪ್ಪಳಕ್ಕೆ ಒಂದು ಹೊಸರೂಪವನ್ನು ನೀಡಿದರು. ಕೊಪ್ಪಳವು ನಗರವಾಗಿ ಕಾಣುವಂತೆ ಮಾಡಿದನು. ಅನೇಕ ಕಛೇರಿಗಳನ್ನು ನಿರ್ಮಿಸಿದನು. ನಗರದ ಸುತ್ತಲೂ ನಾಲ್ಕು ಅಗಸಿಗಳನ್ನು ನಿರ್ಮಿಸಿ ಕೊಪ್ಪಳ ನಗರಕ್ಕೆ ರಕ್ಷಾಕವಚ ನಿರ್ಮಿಸಿದನು. ಜೊತೆಗೆ ಅನೇಕ ಮಸೀದಿ, ಮಂದಿರ, ಧರ್ಮಶಾಲೆಗಳನ್ನು ಕಟ್ಟಿಸಿದರು. ಜೊತೆಗೆ ‘ಹುಲಿಕೆರೆ’ಯನ್ನೂ ಕಟ್ಟಿ ಮನೆಮನೆಗೆ ನೀರಿನ ಸೌಕರ್ಯ ಒದಗಿಸಿದನು. ತಾಲೂಕಾಧಿಕಾರದ ಜೊತೆಗೆ ರೇಲ್ವೆ ಮ್ಯಾಜಿಸ್ಟ್ರೇಟರೂ ಆಗಿದ್ದರು. ಇವರ ಅವಧಿಯಲ್ಲೇ ಕೊಪ್ಪಳ ಮತ್ತು ಗದಗದಿಂದ ಬಳ್ಳಾರಿ ರೇಲ್ವೆ ಮಾರ್ಗವನ್ನು ಕಲ್ಪಿಸಿದರು. ಇಂತಹ ಕ್ರಿಯಾಶೀಲ ವ್ಯಕ್ತಿಗಳ ಅವಧಿಯಲ್ಲಿ ‘ಹುಲಿಕೆರೆ’ ನಿರ್ಮಾಣವಾಯಿತೆಂದು ಇತಿಹಾಸದಿಂದ ತಿಳಿದುಬರುತ್ತದೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ಇದು ಪೂರ್ಣಪ್ರಮಾಣದಲ್ಲಿ ನಿರ್ಮಾಣವಾದ ಕೆರೆಯಲ್ಲ. ಇದು ಸುತ್ತಲೂ ಹಲವು ಭಾಗಗಳಲ್ಲಿ ಸಹಜವಾಗಿ ನಿರ್ಮಾಣವಾದ ಬೆಟ್ಟಗಳ ಮಧ್ಯದಲ್ಲಿದೆ. ಒಂದು ಭಾಗದಲ್ಲಿ ಸಾಮಾನ್ಯವಾಗಿ ನೀರು ಹರಿದುಹೋಗುವ ದಾರಿಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿ ನೀರನ್ನು ಸಂಗ್ರಹಿಸಲಾಗುತ್ತಿದೆ. ಪ್ರಾಚೀನ ಕಾಲದಲ್ಲಿ ಸಾರ್ವಜನಿಕರಿಗೆ ಈ ಕಟ್ಟೆಯ ಕಾಲುವೆ ಅಥವಾ ಪೈಪ್ ಲೈನ್ಗಳ ಮೂಲಕವೇ ನೀರು ಸರಬರಾಜು ಆಗುತ್ತಿತ್ತೆಂದು ತಿಳಿದುಬರುತ್ತಿದೆ. ಆದರೆ ಇಂದು ಆ ರೀತಿಯಲ್ಲಿ ನೀರು ಸರಬರಾಜು ವ್ಯವಸ್ಥೆ ಇರುವುದಿಲ್ಲ. ಆ ಕೆರೆಯ ನೀರು ಹರಿದು ಹೋಗುವುದಿಲ್ಲ. ಹೀಗಾಗಿ ನಿಂತ ಆ ನೀರು ಕುಡಿಯಲು ಯೋಗ್ಯವಾಗಿಲ್ಲ. ಆದರೂ ದನ-ಕರುಗಳಿಗೆ ಕುಡಿಯಲು, ಮೈತೊಳೆಯಲು, ವಾಹನ ತೊಳೆಯಲು ಇತ್ಯಾದಿ ಕೆಲಸಗಳಿಗೆ ಈ ಕೆರೆಯ ನೀರನ್ನು ಬಳಸಲಾಗುತ್ತಿದೆ.
ಇದು ಬಹಳ ಪುರಾತನ ಕೆರೆಯಾಗಿದೆ. ಯಾಕೆಂದರೆ ಸಹಜ ಬೆಟ್ಟ-ಗುಡ್ಡಗಳ ಸಾಲಿನಲ್ಲಿ ನಿರ್ಮಾಣವಾಗಿದ್ದರಿಂದ ಇದು ಬಹಳ ಪುರಾತನ ಕೆರೆ ಎಂಬುದರಲ್ಲಿ ಅನುಮಾನವಿಲ್ಲ. ಹಿರಿಯರ ಅಭಿಪ್ರಾಯದಂತೆ ಈ ಕೆರೆಗೆ ‘ಹುಲಿಕೆರೆ’ ಎಂಬ ಹೆಸರು ಯಾಕೆ ಬಂತು ಎನ್ನುವುದನ್ನು ತಿಳಿದುಕೊಂಡಾಗ ರೋಚಕ ಮಾಹಿತಿ ಹೇಳುತ್ತಾರೆ. ಈ ಕೆರೆಗೆ ‘ಹುಲಿ’ಗಳು ನೀರು ಕುಡಿಯಲು ಬರುತ್ತಿದ್ದವು. ಅದಕ್ಕಾಗಿ ಇದನ್ನು ‘ಹುಲಿಕೆರೆ’ ಎಂದು ಕರೆದರು ಎಂದು ಹೇಳಲಾಗುತ್ತಿದೆ. ಆದರೆ ಇಂದು ವಾಸ್ತವದಲ್ಲಿ ಕೊಪ್ಪಳ ಪರಿಸರದಲ್ಲಿ ಹುಲಿಗಳ ವಾಸ ಹೆಚ್ಚಾಗಿ ಕಂಡುಬರುವುದಿಲ್ಲ. ಕರಡಿ, ಚಿರತೆ, ಮಂಗ್ಯ ಮತ್ತು ಇತರೆ ಪ್ರಾಣಿ ಸಂಕುಲಗಳು ಇಲ್ಲಿ ವಾಸಿಸುತ್ತವೆ. ಆದರೆ ಹುಲಿಗಳ ವಾಸದ ಬಗ್ಗೆ ತಿಳಿದುಬರುವುದಿಲ್ಲ. ಬಹುಶಃ ಇದು ಪುರಾತನ ಸಂಗತಿಯೇ ಇರಬೇಕು. ಪ್ರಾಚೀನ ಕಾಲದಲ್ಲಿ ಈ ಪರಿಸರದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿರಬಹುದು. ಯಾಕೆಂದೆರೆ ಈ ಕೆರೆಯು ಹಲವು ಬೆಟ್ಟಗಳಿಂದ ಆವೃತ್ತವಾಗಿದೆ. ಸಹಜವಾಗಿಯೇ ಇಲ್ಲಿ ಪ್ರಾಣಿ ಸಂಕುಲಗಳು ವಾಸಿಸುತ್ತವೆ. ಅದರಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿರಬೇಕು. ಈ ಬೆಟ್ಟಗಳ ಸಾಲಿನಲ್ಲಿ ವಾಸಮಾಡುವ ಹುಲಿಗಳು ಪಕ್ಕದಲ್ಲೇ ಇರುವ ಕೆರೆಗೆ ನೀರು ಕುಡಿಯಲು ಬರುತ್ತಿರಬೇಕು. ಅದಕ್ಕಾಗಿ ಇದಕ್ಕೆ ‘ಹುಲಿಕೆರೆ’ ಎಂದು ಕರೆದಿರಬಹುದು. ಆದರೆ ಎಂದಿನಿಂದ ಎಂಬ ಬಗ್ಗೆ ಮಾಹಿತಿ ಲಭ್ಯವಾಗುವುದಿಲ್ಲ. ಆದರೂ ಹುಲಿಗಳ ಹೆಸರಿಂದ ಇದು ಗುರುತಿಸಿಕೊಂಡಿರುವುದರಿಂದ ಇದು ಪುರಾತನ ಕೆರೆ ಎಂಬುದು ಮಾತ್ರ ಸತ್ಯ.
ಕೊಪ್ಪಳ ಪರಿಸರದಲ್ಲಿ ಪ್ರಾಣಿ-ಪಶು-ಪಕ್ಷಿಗಳ ಹೆಸರಿನ ಮೇಲೆ ಕೆರೆ-ಕಟ್ಟೆಗಳು, ಬೆಟ್ಟ-ಗುಡ್ಡಗಳು, ಬಾವಿಗಳು ಹೇಗೆ ನಿರ್ಮಾಣಗೊಂಡಿವೆಯೋ ಅದರಂತೆ ಗ್ರಾಮಗಳ ನಾಮಗಳು ಸಹ ಕರೆಸಿಕೊಂಡಿವೆ. ಹುಲಿಹೈದರ್, ಕರಡಿಗುಡ್ಡ, ಕೋತಿಗುಡ್ಡ, ನವಲಿ, ಯತ್ನಟ್ಟಿ, ಬುಕನಟ್ಟಿ ಮುಂತಾದ ಗ್ರಾಮಗಳನ್ನು ಕೊಪ್ಪಳ ಪರಿಸರದಲ್ಲೇ ಗಮನಿಸಿದಾಗ ಅದು ನಿಜವೆನಿಸುತ್ತದೆ. ಅದರಂತೆ ಈ ಕೆರೆಗೆ ‘ಹುಲಿಕೆರೆ’ ಎಂದು ಕರೆದಿರಬಹುದು.
ಈ ಹುಲಿಕೆರೆಯು ಸುತ್ತಲೂ ಗುಡ್ಡಗಳಿಂದ ಆವೃತಗೊಂಡಿದೆ. ಒಂದು ಭಾಗದಲ್ಲಿ ಮಳೆಮಲ್ಲೇಶ್ವರ ಬೆಟ್ಟದ ಸಾಲಿನಿಂದ ಸುತ್ತುವರೆದಿದೆ. ಕೆರೆಯ ಮುಂದಿನ ಎಡಭಾಗದಲ್ಲಿ ಸುಮಾರು 17ನೇ ಶತಮಾನಕ್ಕೆ ಸೇರಿದ ಸೂಫಿಸಂತ ಗಯಬ್ ಮರ್ದಾನಲಿ ದರ್ಗಾವಿದೆ. ಈ ದರ್ಗಾ ಭಾವೈಕ್ಯತೆಯ ತಾಣವಾಗಿದೆ. ಬಲಭಾಗದಲ್ಲಿ ಸುಮಾರು 12-13ನೇ ಶತಮಾನಕ್ಕೆ ಸೇರಿದ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ಈಶ್ವರ ದೇವಸ್ಥಾನವಿದೆ. ಇಂದು ಆ ದೇವಸ್ಥಾನವನ್ನು ಶಿವರಾತ್ರೇಶ್ವರ ದೇವಸ್ಥಾನ ಎಂದು ಕರೆಯಲಾಗುತ್ತಿದೆ. ಅದರ ಪಕ್ಕದಲ್ಲೇ ದಿಡ್ಡಿಕೇರಿ ಎಂಬ ಪ್ರದೇಶವಿದೆ. ಅದರ ಅನತಿ ದೂರದಲ್ಲೇ ಮತ್ತೊಂದು ಭಾವೈಕ್ಯತೆಯ ತಾಣವಾದ ಶಿರಸಪ್ಪಯ್ಯನ ಮಠವಿದೆ. ಹೀಗೆ ಈ ಕೆರೆಯ ಸುತ್ತಲೂ ಭಾವೈಕ್ಯತೆಯ ತಾಣಗಳಿರುವುದು ಬಹಳ ವಿಶೇಷ.
ಈ ಕೆರೆಯು ಸುಮಾರು ಒಂದುನೂರು ಎಕರೆಯ ಜಾಗದಲ್ಲಿ ವಿಸ್ತಾರವಾಗಿ ಹರಡಿಕೊಂಡಿದೆ. ಅದರ ಸುತ್ತಲೂ ಬೆಟ್ಟದ ಸಾಲುಗಳಿರುವುದರಿಂದ ಇಂದು ಕೇವಲ 34 ಎಕರೆ ಮಾತ್ರ ನೀರಿನಿಂದ ತುಂಬಿಕೊಂಡಿದೆ. ಉಳಿದ ಭಾಗ ಗುಡ್ಡದ ಸಾಲಿನ ಕಲ್ಲು, ದಿನ್ನೆ, ಗಿಡ-ಗಂಟೆಗಳಿAದ ತುಂಬಿಕೊಂಡಿದೆ. ಕೆರೆಯ ತುದಿಯಲ್ಲಿ 3-4 ಅಡಿಗಳ ನೀರಿನ ಆಳವಿದ್ದರೆ, ಮಧ್ಯದಲ್ಲಿ ಸುಮಾರು 15 ಅಡಿಗಳಷ್ಟು ನೀರು ಆಳವಿದೆ ಎಂದು ಹೇಳಲಾಗುತ್ತಿದೆ. ಇಂದು ಈ ಕೆರೆ ಕೊಪ್ಪಳ ನಗರಸಭೆಯ ಸುಪರ್ದಿಯಲ್ಲಿ ಬರುತ್ತದೆ.
ಪಕ್ಷಿ ಶಾಸ್ತçಜ್ಞರಾದ ಶ್ರೀ ಸಮದ್ ಕೊಟ್ಟೂರುರವರ ಅಭಿಪ್ರಾಯದಂತೆ ಈ ಹುಲಿಕೆರೆಗೆ ಬರುವ ಪಕ್ಷಿಗಳ ಹಿಂಡು ಸಾವಿರಾರು. ದೇಶದ ತಳಿಗಳಿಂದ ಹಿಡಿದು ವಿದೇಶಿಗಳ ತಳಿಗಳೂ ಸಹ ಇಲ್ಲಿ ಕೆಲ ದಿನಗಳಕಾಲ ತಂಗಿ ಹೋಗುತ್ತವೆ. ಕೆಲ ಪಕ್ಷಿಗಳಂತೂ ಕಾಲಕ್ಕೆ ತಕ್ಕಂತೆ ಬಂದು ಹೋಗುತ್ತಿರುವುದು ಬಹಳ ವಿಶೇಷ. ಕೆಲ ಪಕ್ಷಿಗಳು ಬೇಸಿಗೆಯಲ್ಲಿ ಬಂದು ಬೇಟಿಕೊಟ್ಟು ಹೋದರೆ, ಇನ್ನು ಕೆಲ ಪಕ್ಷಿಗಳು ಚಳಿಗಾಲದಲ್ಲಿ ಬಂದು ಹೋಗುತ್ತಿರುತ್ತವೆ. ವಸಂತಕಾಲ ಮತ್ತು ಶರತ್ಕಾಲದಲ್ಲಿ ಪಕ್ಷಿಗಳು ಚಂಚಲತೆಯನ್ನು ಅನುಭವಿಸುತ್ತವೆ. ಹೀಗಾಗಿ ಆ ಸಂದರ್ಭದಲ್ಲಿ ಪಕ್ಷಿಗಳ ಓಡಾಟ ಹೆಚ್ಚಿರುತ್ತದೆ. ಆದರೆ ಇದು ಕೆಸರು ಕೆರೆಯಲ್ಲ. ಕೆಸರು ಕೆರೆಯಾಗಿದ್ದರೆ ವಲಸೆ ಪಕ್ಷಿಗಳ ಸಂಖ್ಯೆ ಹೆಚ್ಚಾಗಿರುತ್ತಿತ್ತು. ಕೆಸರಿನಲ್ಲಿ ಹೇರಳವಾಗಿ ಸಿಗುವ ಹುಳುಗಳ ತಿನ್ನುವುದಕ್ಕಾಗಿ ನಾನಾ ಜಾತಿಯ ಪಕ್ಷಿಸಂಕುಲಗಳು ಇಲ್ಲಿಗೆ ಆಗಮಿಸುತ್ತವೆ. ಬೇಸಿಗೆ ಕಾಲಕ್ಕೆ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ ಆಗಲೂ ಸಹ ಪಕ್ಷಿಗಳು ಕಡಿಮೆ ಪ್ರಮಾಣದಲ್ಲಿರುತ್ತವೆ. ಮಳೆಗಾಲದಲ್ಲಿ ಪಕ್ಷಿಗಳನ್ನು ಹೆಚ್ಚಿನ ರೀತಿಯಲ್ಲಿ ಕಾಣಬಹುದು. ಸುತ್ತಲೂ ಬೆಟ್ಟಗಳಿಂದ ನೀರು ಹರಿದುಬರುವುದರಿಂದ ಆ ನೀರಿನ ಮೂಲಕ ಸಸ್ಯ ಜಲಚರಗಳು ಹರಿದುಬಂದು ಕೆರೆಯನ್ನು ಸೇರುತ್ತವೆ. ಆ ಸಸ್ಯ ಜಲಚರಗಳನ್ನು ತಿನ್ನವ ಪಕ್ಷಿಗಳು ಸಹಜವಾಗಿ ಬರುತ್ತಿರುತ್ತವೆ. ಗುಬ್ಬಿ, ಕಾಗೆ, ಗೀಜಗ, ಗೊರವಂಕ, ಕೌಜುಗ, ಮೈನಾ, ನೊಣಹಿಡುಕ, ಸಿಪಿಲೆ, ಬೆಳವ, ಪಾರಿವಾಳ, ಬುರ್ಲಿ, ಕಳ್ಳುವಳಕ, ಬೆಳ್ಳಕ್ಕಿ, ಚುಕ್ಕೆಬಾತುಕೋಳಿ, ಭಕಪಕ್ಷಿ, ಹುಂಡುಕೋಳಿ ಮುಂತಾದ ಸ್ಥಳೀಯ ಪಕ್ಷಿಗಳು ಈ ಹುಲಿಕೆರೆಗೆ ಬರುತ್ತವೆ. ಅಲ್ಲದೇ ಚಳಿಗಾಲದಲ್ಲಿ ಮರುಳ ಪೀಪಿ, ಕಲ್ಲುಚಟುವ, ಸೂಜಿಬಾತು ಮುಂತಾದ ಪಕ್ಷಿಗಳು ವಲಸೆಬರುತ್ತವೆ ಎಂದು ಸಮದ್ರವರು ಮಾಹಿತಿ ನೀಡುತ್ತಾರೆ.
ಜಿಲ್ಲಾ ಪಂಚಾಯತಿ ಹಣಕಾಸು ಅಧಿಕಾರಿ ಹಾಗೂ ಹವ್ಯಾಸಿ ಫೋಟೋಗ್ರಾಫರ್ ಅಮೀನ್ ಅತ್ತಾರ್ರವರು ಕೊಪ್ಪಳ ಹುಲಿಕೆರೆಗೆ ಬರುವ ಹಲವು ಸ್ವದೇಶಿ ಮತ್ತು ವಿದೇಶಿ ಪಕ್ಷಿಗಳ ಕುರಿತು ಅಧ್ಯಯನ ಮಾಡಿದ್ದಾರೆ. ಮತ್ತು ಫೋಟೋಗ್ರಾಫಿಯೂ ಸಹ ಮಾಡಿ ಅವುಗಳನ್ನು ಸಂಗ್ರಹಿಸಿದ್ದಾರೆ. ಇಂಡಿಯನ್ ಈಗಲ್ ವೊಲ, ಸೈಬಿರಿಯನ್ ಸ್ಟೋನ್ ಚಾಟ್, ಫೈಡ್ ಕಿಂಗಫಿಶರ್, ವೈಟ್ ಥ್ರೋಟೆಡ್ ಕಿಂಗ್ಪಿಶರ್, ನದಿರೀವ, ಸ್ಪಾಟ್ ಬೆಲಿಡ್ಡಕ್, ಬಿಳಿಸಿಪಿಲೆ, ಹಳದಿಸಿಪಿಲೆ ಮುಂತಾದ ಸ್ವದೇಶಿ ಪಕ್ಷಿಗಳು ಈ ಕೆರೆಗೆ ಬರುತ್ತವೆ. ಅವು ವಿಶೇಷವಾಗಿ ಚಳಿಗಾಲದಲ್ಲಿ ಬರುತ್ತವೆ. ಯಾಕೆಂದರೆ ಚಳಿಗಾಲದಲ್ಲಿ ತಾವು ವಾಸಿಸುವ ಪ್ರದೇಶದಲ್ಲಿ ಆಹಾರ ಕೊರತೆಯುಂಟಾಗುತ್ತೆ ಮತ್ತು ಚಳಿ ಹೆಚ್ಚಾಗಿರುತ್ತದೆ. ಹೀಗಾಗಿ ಆಹಾರ ಹುಡುಕುತ್ತಾ ಚಳಿ ಕಡಿಮೆ ಇರುವ ಈ ಕೊಪ್ಪಳ ಪ್ರದೇಶಕ್ಕೆ ವಲಸೆ ಬರುತ್ತವೆ. ಇವುಗಳ ಜೊತೆಗೆ ಉತ್ತರ ಭಾರತದಿಂದಲೂ ಸಹ ಕೆಲ ಪಕ್ಷಿಗಳೂ ಈ ಕೆರೆಗೆ ಬರುತ್ತವೆ. ಬ್ರಾಂಜ್ ವಿಂಗ್ಡ್ ಜಕಾನ ಎಂಬ ಪಕ್ಷಿಯು ಜೂನ್ದಿಂದ ಸೆಪ್ಟಂಬರ್ ಅವಧಿಯಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತದೆ. ಮತ್ತು ಕಾಮನ್ ಮೂರಹೆನ್ ಎನ್ನುವ ಪಕ್ಷಿಯೂ ಸಹ ಎಪ್ರಿಲ್ನಿಂದ ಆಗಷ್ಟ್ ತಿಂಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಹುಲಿಕೆರೆಯ ಮತ್ತೊಂದು ವೈಶಿಷ್ಟö್ಯವೆಂದರೆ ವಿದೇಶದಿಂದಲೂ ಕೆಲ ಪಕ್ಷಿಗಳು ಆಗಮಿಸುತ್ತವೆ ಎಂದು ಅಮೀನ್ರವರು ಅಭಿಪ್ರಾಯ ಪಡುತ್ತಾರೆ. ಕಾಮನ್ ಕೆಸ್ಟರಲ್ ಎಂಬ ಇಂಗ್ಲೆAಡಿನ ಹದ್ದು ಮತ್ತು ಶಾರ್ಟ್ ಟೊಯ್ ಸ್ನೇಕ ಈಗಲ್ ಎಂಬ ಪಕ್ಷಿಗಳು ಯೂರೋಪ್ ರಾಷ್ಟçದಿಂದ ವಲಸೆ ಬರುತ್ತವೆ. ಯೂರೋಪ್ ರಾಷ್ಟçದಿಂದ ವಲಸೆ ಬರುವ ಈ ಪಕ್ಷಿಗಳು ಆಹಾರ ಲಭ್ಯತೆ ಹಾಗೂ ಪರಿಸರದ ಆಧಾರದ ಮೇಲೆ ಇಲ್ಲಿಯೇ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಅತ್ತಾರರವರು ಪತ್ತೆ ಹಚ್ಚಿದ್ದಾರೆ. ಈ ಶಾರ್ಟ್ ಟೊಯ್ ಸ್ನೇಕ ಈಗಲ್ ಎಂಬ ಪಕ್ಷಿಯು ಯೂರೋಪ್ ರಾಷ್ಟçದಿಂದ ಸುಮಾರು ಆರು-ಏಳುಸಾವಿರ ಕಿ.ಮೀ ದೂರದಿಂದ ಬರುತ್ತಿರುವುದು ಬಹಳ ವೈಶಿಷ್ಟ್ಯವೇ ಸರಿ. ಇವುಗಳಿಗೆ ಪಕ್ಷಿಶಾಸ್ತ್ರಜ್ಞರು ಜಿಪಿಆರ್ ಅಳವಡಿಸುವ ಮೂಲಕ ಅಧ್ಯಯನ ಮಾಡುತ್ತಾರೆಂದು ಅವರು ತಿಳಿಸುತ್ತಾರೆ. ಕೊಪ್ಪಳದ ಹುಲಿಕೆರೆಯಲ್ಲಿರುವ ಇಂತಹ ಅಪರೂಪದ ಪಕ್ಷಿಗಳನ್ನು ಅಮೀನ ಅತ್ತಾರರವರು ಪತ್ತೆಮಾಡಿ ತಮ್ಮ ಫೋಟೋಗ್ರಾಫಿಯಲ್ಲಿ ಸೆರೆಹಿಡಿದಿದ್ದಾರೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಕೆರೆಗೆ ಬರುವ ಪಕ್ಷಿಗಳದ್ದೇ ಕುರಿತು ಒಂದು ಅಧ್ಯಯನ ನಡೆಯಬೇಕಿದೆ. ಆಗ ಸಾವಿರಾರು ವರ್ಷಗಳಿಂದ ಪ್ರಾಣಿ-ಪಶು-ಪಕ್ಷಿ-ಜಾನುವಾರುಗಳಿಗೆ ಮತ್ತು ಮನುಷ್ಯರಿಗೂ ಸಹ ನೀರುಣಿಸಿ ಕಾಪಾಡಿದ ಈ ಹುಲಿಕೆರೆಯ ಚರಿತ್ರೆ ತಿಳಿದುಬರುತ್ತದೆ.
ಒಟ್ಟಿನಲ್ಲಿ ಕೊಪ್ಪಳದ ಈ ಹುಲಿಕೆರೆಯು ನಿರ್ಮಾಣಗೊಂಡು ಮನುಷ್ಯರಿಗೆ ಕುಡಿಯಲು, ಉಪಯೋಗಿಸಲು ನೀರುಣಿಸುವುದರ ಜೊತೆಗೆ ವಿವಿಧ ಜಾತಿಯ ಜಲಚರಗಳಿಗೆ ಆಶ್ರಯ ನೀಡಿದೆ. ವಿವಿಧ ಜಾತಿ ಪಕ್ಷಿಗಳಿಗೆ ಆಶ್ರಯ ನೀಡುತ್ತಾ ಕಾಲಗರ್ಭದಲ್ಲಿ ಹೆಸರಿಗಷ್ಟೇ ಸೀಮಿತವಾಗಿದೆ. ಅದನ್ನು ಇಂದು ಪೂರ್ಣಪ್ರಮಾಣದಲ್ಲಿ ಕಬಂಧಬಾಹು ಚಾಚಿ ರಕ್ಷಿಸಬೇಕಿದೆ. ಮುಖ್ಯವಾಗಿ ಅದರ ಚರಿತ್ರೆ ಇಂದಿನ ಪೀಳಿಗೆಗೆ ತಿಳಿಹೇಳುವುದು ಬಹಳ ಮುಖ್ಯವಾಗಿದೆ.
ಸಂ,ಡಾ.ದೇವರಕೊಂಡಾರೆಡ್ಡಿ, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-2, ಕೊಪ್ಪಳ ಜಿಲ್ಲೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ-1999
ವೀರನಗೌಡರು ಡಿ.ಎಸ್. ಪಾಟೀಲ, ಸಾಲರಜಂಗ ಬಹದ್ದೂರ ಇವರ ಚರಿತ್ರೆ, ಶ್ರೀ ಚನ್ನಪ್ಪ ಮಾಳಶೆಟ್ಟಿ, ಪ್ರಕಾಶನ, ಗದಗ-1941
ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್, ಕೊಪ್ಪಳ ಜಿಲ್ಲೆಯ ಶಾಸನಗಳು ಮತ್ತು ಸಾಂಸ್ಕೃತಿಕ ಇತಿಹಾಸ(ಪರೀಷ್ಕೃತ ಎರಡನೆ ಮುದ್ರಣ), ಮೇಘನಾ ಪ್ರಕಾಶನ, ಕೊಪ್ಪಳ-2020
ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್, ಕೊಪ್ಪಳ ಚರಿತ್ರೆ ಮತ್ತು ಸಂಸ್ಕೃತಿಯ ಹುಡುಕಾಟ, ಮೇಘನಾ ಪ್ರಕಾಶನ, ಕೊಪ್ಪಳ-2023
ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್
ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-583231
ಮೊ ಸಂ:-9448570340
E-mail:- skotnekal@gmail.com
ಕೇಂದ್ರ ಸರ್ಕಾರ ಯೋಜನೆಗಳನ್ನು ಪಡೆಯಲು ರೈತರ ಸೆಂಟ್ರಲ್ ಐಡಿ ಕಡ್ಡಾಯ Farmers' Central ID mandatory to avail central…
Verdict in the murder case at the Taluwagera fair: 15 convicts sentenced to 7 years…
The ceremony of the 2025-26 class 10th students of Aaron Mirajkar School began with the…
2022 State Level Book Selection List Published: Objection Invited 2022ನೇ ಸಾಲಿನ ರಾಜ್ಯ ಮಟ್ಟದ ಪುಸ್ತಕ ಆಯ್ಕೆ…
Awareness program as part of World Hearing Day ವಿಶ್ವ ಶ್ರವಣ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ಕೊಪ್ಪಳ…
Selected as a civil judge in the first attempt: Santosh Belagode receives grand honours at…