Arrest BJP who received crores of rupees from Delhi excise scam company: AP leader Harish
ವರದಿ : ಬಂಗಾರಪ್ಪ ಸಿ .
ಹನೂರು : ಅಬಕಾರಿ ನೀತಿಗೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಪಿ. ಶರತ್ ಚಂದ್ರ ರೆಡ್ಡಿ ಅವರ ಅರಬಿಂದೋ ಫಾರ್ಮಾ ಕಂಪನಿಯು ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿಗೆ ಕೋಟ್ಯಂತರ ರೂಪಾಯಿ ನೀಡಿದ್ದು ಬಹಿರಂಗಗೊಂಡಿದೆ. ಹೀಗಾಗಿ ಬಿಜೆಪಿ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಬಂಧಿಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಚಾಮರಾಜನಗರ ಜಿಲ್ಲಾಧ್ಯಕ್ಷ ಹರೀಶ್ ಒತ್ತಾಯಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದಕ್ಕೆ ಸಂಬಂಧಿಸಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಹರೀಶ್, ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅನೇಕ ಇಡಿ ದಾಳಿಗಳು ಮತ್ತು ಎರಡು ವರ್ಷಗಳ ಸುದೀರ್ಘ ತನಿಖೆ ಹೊರತಾಗಿಯೂ ಯಾವುದೇ ಎಎಪಿ ನಾಯಕರ ಬಳಿಯಾಗಲಿ, ಕಾರ್ಯಕರ್ತರ ಬಳಿಯಾಗಲಿ ಒಂದೇ ಒಂದು ರೂಪಾಯಿ ಅಕ್ರಮ ಹಣವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ತಪ್ಪಿತಸ್ಥರು ಎನ್ನಲು ಅವರ ಬಳಿ ಪುರಾವೆಗಳೂ ಇಲ್ಲ. ನಡೆದಿರದ ಭ್ರಷ್ಟಾಚಾರವನ್ನು ನಡೆದಿದೆ ಎಂದು ಸುಳ್ಳಾಗಿ ಬಿಂಬಿಸಿ ಎದುರಾಳಿಯಾಗಿ ನಿಂತಿರುವ ಕೇಜ್ರಿವಾಲ್ ಅವರನ್ನು ಹತ್ತಿಕ್ಕುವ ಪ್ರಯತ್ನವನ್ನು ನರೇಂದ್ರ ಮೋದಿ ನಡೆಸುತ್ತಿದ್ದಾರೆ ಎಂದರು.
ಶರತ್ ಚಂದ್ರ ರೆಡ್ಡಿ ಅವರಿಗೆ ನವೆಂಬರ್ 9, 2022ರಂದು ಸಮನ್ಸ್ ನೀಡಲಾಯಿತು. ವಿಚಾರಣೆ ವೇಳೆ ಅವರು, ತಾವು ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿಲ್ಲ ಅಥವಾ ಮಾತನಾಡಿಲ್ಲ ಮತ್ತು ಎಎಪಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಅದಾದ ಮರುದಿನವೇ ಇ.ಡಿ ಅವರನ್ನು ಬಂಧಿಸಿತು. ಕೇಜ್ರಿವಾಲ್ ವಿರುದ್ಧ ಸಾಕ್ಷಿ ಹೇಳುವಂತೆ ಹೆದರಿಸಿತು. ಚುನಾವಣೆ ಬಾಂಡ್ ಹೆಸರಲ್ಲಿ ದೇಣಿಕೆ ಕೊಡುವಂತೆಯೂ ಬೆದರಿಸಿತು. ಈವರೆಗೂ ಜೈಲಿನಲ್ಲಿದ್ದ ರೆಡ್ಡಿ ಅವರು ಇದೀಗ ತಮ್ಮ ಹೇಳಿಕೆ ಬದಲಾಯಿಸಿಕೊಂಡರು. ತಮ್ಮ ಫಾರ್ಮಾ ಕಂಪನಿ ಮೂಲಕ ಕೋಟಿ ಕೋಟಿ ದೇಣಿಗೆ ನೀಡಿದರು. ನಂತರ ಅಬಕಾರಿ ನೀತಿ ವಿಚಾರವಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ ಎಂದರು. ಅವರು ಹಾಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ ತಕ್ಷಣವೇ ಬೆನ್ನು ನೋವಿನ ನೆಪದಲ್ಲಿ ಅವರಿಗೆ ಜಾಮೀನು ಕೊಡಲಾಗಿದೆ. ಪ್ರಮುಖ ಆರೋಪಿಯೊಬ್ಬರಿಗೆ ಬೆನ್ನು ನೋವಿನ ಕಾರಣಕ್ಕೆ ಜಾಮೀನು ನೀಡಿದ ಬೇರೆ ಉದಾಹರಣೆ ಇದೆಯೇ? ಏನೂ ತಪ್ಪೆಸಗದ ನಮ್ಮ ನಾಯಕರಾದ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ಸತ್ಯೇಂದ್ರ ಜೈನ್ ಅವರನ್ನು ಜೈಲಿನಲ್ಲಿ ಇರಿಸಿಕೊಳ್ಳಲಾಗಿದೆ. ಇದು ಕುತಂತ್ರ ರಾಜಕಾರಣವಲ್ಲದೆ ಬೇರೇನು? ಎಂದು ಪ್ರಶ್ನಿಸಿದರು.
ಹೈದರಾಬಾದ್ ಮೂಲದ ಉದ್ಯಮಿ ಪಿ ಶರತ್ ಚಂದ್ರ ರೆಡ್ಡಿ ಅರಬಿಂದೋ ಫಾರ್ಮಾ ಲಿಮಿಟೆಡ್ನ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ನವೆಂಬರ್ 10, 2022 ರಂದು ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇ.ಡಿ ಅವರನ್ನು ಬಂಧಿಸಿತು. ಬಳಿಕ ನವೆಂಬರ್ 15ರಂದು ರೆಡ್ಡಿ ಅವರ ಅರಬಿಂದೋ ಫಾರ್ಮಾ ಕಂಪನಿ 5 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ಗಳನ್ನು ಖರೀದಿಸಿ, ಬಿಜೆಪಿಗೆ ನೀಡಿದೆ. ನವೆಂಬರ್ 21 ರಂದು ಅವುಗಳನ್ನು ಬಿಜೆಪಿ ನಗದಾಗಿ ಪರಿವರ್ತಿಸಿಕೊಂಡಿದೆ ಎಂದು ತಿಳಿಸಿದರು.
ಅರಬಿಂದೋ ಫಾರ್ಮಾ ಒಟ್ಟು 52 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ಗಳನ್ನು ಖರೀದಿಸಿದ್ದು, ಅದರಲ್ಲಿ 34.5 ಕೋಟಿ ರೂ. ಬಿಜೆಪಿ ಪಾಲಾಗಿದೆ. ಭಾರತ್ ರಾಷ್ಟ್ರ ಸಮಿತಿಗೆ 15 ಕೋಟಿ ಹಾಗೂ ತೆಲುಗು ದೇಶಂ ಪಕ್ಷಕ್ಕೆ 2.5 ಕೋಟಿ ದೇಣಿಗೆ ನೀಡಿದೆ ಎಂದರು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…